ಕನ್ನಡ ಚಿತ್ರಗಳಿಗೆ ಎಳ್ಳುನೀರು ಬಿಟ್ಟ ನಟಿ ತ್ರಿಶಾ ಕೃಷ್ಣನ್
ತಮಿಳು, ತೆಲುಗು ಚಿತ್ರಗಳಲ್ಲಿ ಮಿಂಚುತ್ತಿರುವ ಮಿಂಚಿನ ಬಳ್ಳಿ ತ್ರಿಶಾ ಕೃಷ್ಣನ್ ಕನ್ನಡ ಚಿತ್ರಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ತಾನು ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಮುಂದೆ ನಟಿಸುವ ಯೋಚನೆಯೂ ತಮಗಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಈ ಹಿಂದೆ ಸಾಕಷ್ಟು ಸಲ ತ್ರಿಶಾ ಕನ್ನಡದಲ್ಲಿ ಅಭಿನಯಿಸುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಸ್ವತಃ ತ್ರಿಶಾ ಮಾತನಾಡುತ್ತಾ ಕನ್ನಡದಲ್ಲಿ ನಟಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಮೂಲಕ ತ್ರಿಶಾ ಅವರು ಪುನೀತ್, ಶಿವಣ್ಣ ಜೊತೆ ನಟಿಸುತ್ತಾರೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ.
ತಾನು ಚೆನ್ನೈ ಹೈದರಾಬಾದ್ ಎಂದು ಸುತ್ತುತ್ತಿರುತ್ತೇನೆ. ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ನಿಜವಾಗಿಯೂ ನನಗೆ ಟೈಮಿಲ್ಲ. ಸುಖಾ ಸುಮ್ಮನೆ ಚಿತ್ರಗಳನ್ನು ಒಪ್ಪಿಕೊಂಡು ಗೊಂದಲ ಸೃಷ್ಟಿಸಲು ನನಗೆ ಇಷ್ಟವಿಲ್ಲ ಎಂದು ಗೋಣುಮುರಿದ್ದಾರೆ.
ಪುನೀತ್ ಜೊತೆ 'ಲಗೋರಿ', ಕನ್ನಡದ 'ರಸಗುಲ್ಲ', ಶಿವರಾಜ್ ಕುಮಾರ್ ಅವರ 'ಸಿಎಂ', ದರ್ಶನ್ ಅವರ 'ಸ್ನೇಹಿತರು' ಚಿತ್ರಗಳಲ್ಲಿ ತ್ರಿಶಾ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಈಗ ಎಲ್ಲವೂ ಸುಳ್ಳಾಗಿದೆ. ಮುಂದೊಂದು ದಿನ ಆಕೆಯ ಜನಪ್ರಿಯತೆ ಕುಗ್ಗಿದಾಗ ಕನ್ನಡದ ಕಡೆ ಮುಖಮಾಡಬಹುದೋ ಏನೋ. ಕಾದು ನೋಡೋಣ. (ಒನ್ಇಂಡಿಯಾ ಕನ್ನಡ)


Click it and Unblock the Notifications











