ಮೈಸೂರು, ಮಂಡ್ಯದಲ್ಲಿ ಮುದ್ದೆ ಗೌಡರ ಭಾರೀ ಗದ್ದಲ
ನಿರ್ಧರಿಸಿದಂತೆ ಇಂದ್ರಜಿತ್ ಲಂಕೇಶ್ ತಮ್ಮ ಚಿತ್ರ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ಮಾಡಿದ್ದಾರೆ. ಮಂಡ್ಯದಲ್ಲಿ ಚಿತ್ರದ ಪ್ರಮೋಶನ್ ಹೆಸರಿನಲ್ಲಿ 50 ಕೆಜಿ ರಾಗಿ ಮುದ್ದೆಯೊಂದನ್ನು ತಯಾರಿಸಿ ಹಂಚಲಾಗಿದೆ. ಆದರೆ ಈ ಚಿತ್ರದಲ್ಲಿ ಮುದ್ದೆ, ಒಕ್ಕಲಿಗರು ಹಾಗೂ ದೇವೇಗೌಡರಿಗೆ ಅವಮಾನ ಮಾಡಲಾಗಿದೆ ಎಂಬ ಕೂಗು ಮಂಡ್ಯ ಹಾಗೂ ಮೈಸೂರಿನಲ್ಲಿ ಧ್ವನಿಸುತ್ತಿದೆ.
ಈ ಚಿತ್ರದ ಶೀರ್ಷಿಕೆಯಲ್ಲಿ ಬಳಸಲಾಗಿರುವ ಮುದ್ದೇಗೌಡ ಎಂಬ ಪದ ದೇವೇಗೌಡರಿಗೆ ಮಾಡಲಾಗಿರುವ ಅವಮಾನ ಎಂದು ಈಗಾಗಲೇ ಒಕ್ಕಲಿಗರ ಸಂಘ ಹೇಳಿದೆ. ಜೊತೆಗೆ ಮೈಸೂರಿನ ಚಿತ್ರಮಂದಿರವೊಂದರಲ್ಲಿ ಈ ಚಿತ್ರದ ನಾಯಕ ದಿಗಂತ್ ಹಾಗೂ ನಾಯಕಿ ಚಾರ್ಮಿ ಕಟ್ ಔಟ್ ಗಳನ್ನು ಹರಿದು ಚಿಂದಿ ಮಾಡಲಾಗಿದೆ. ಮುದ್ದೆ ಗಲಾಟೆ ನಿರೀಕ್ಷೆಗಿಂತ ಹೆಚ್ಚು ನಡೆದಿದ್ದು ಚಿತ್ರದ ಬಗ್ಗೆ ಪ್ರಚಾರಕ್ಕಿಂತ ಅಪಪ್ರಚಾರವೇ ಹೆಚ್ಚು ನಡೆಯುತ್ತಿದೆ ಎನ್ನಲಾಗಿದೆ.
ಆದರೆ ನಿರ್ದೇಶಕ ಇಂದ್ರಜಿತ್ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ " ನಮ್ಮ ದೇವ್ ಸನ್ ಆಪ್ ಮುದ್ದೇಗೌಡ ಚಿತ್ರದಲ್ಲಿ ಮುದ್ದೆ ತಿನ್ನುವವರಿಗಾಗಲೀ, ದೇವೇಗೌಡರಿಗಾಗಲೀ ಅಥವಾ ಒಕ್ಕಲಿಗ ಸಮುದಾಯಕ್ಕಾಗಲೀ ಯಾವುದೇ ರೀತಿಯಲ್ಲಿ ಅವಹೇಳನ ಮಾಡಲಾಗಿಲ್ಲ. ಇನ್ನು ಚಿತ್ರದಲ್ಲಿ ಬರುವ ದಿಗಂತ್ ಪಾತ್ರ ರೂಪದರ್ಶಿಯದ್ದು. ಹಾಗಾಗಿ ಪ್ಯಾಂಟ್ ಬಿಚ್ಚಿಸಿದ ಚಿತ್ರವನ್ನು ಪೋಸ್ಟರ್ ಗಳಲ್ಲಿ ಬಳಸಿಕೊಳ್ಳಲಾಗಿದೆ" ಎಂದಿದ್ದಾರೆ. (ಅಂದಹಾಗೆ, ರಾಗಿ ಮುದ್ದೆ ಮಾಡುವುದು ಹೇಗೆ ಗೊತ್ತಾ?)
ಈ ಚಿತ್ರ ಇದೇ ತಿಂಗಳು, ಏಪ್ರಿಲ್ 6, 2012 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಯೂ ಟ್ಯೂಬ್ ನಲ್ಲಿ ಅದಕ್ಕೂ ಮೊದಲೇ ಭಾರತ ಹೊರತುಪಡಿಸಿ ಮಿಕ್ಕ ಕಡೆ ಸಿನಿಮಾ ಪ್ರೀಮಿಯರ್ ಶೋ ಲಭ್ಯವಿದೆ. ಒಟ್ಟಿನಲ್ಲಿ ಚಿತ್ರದ ಬಿಡುಗಡೆ ಸಮೀಪಿಸುತ್ತಿದ್ದಂತೆ ಮುದ್ದೆ ಗಲಾಟೆಯೂ ಜೋರಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











