ಬೆಳ್ಳಿಪರದೆಗೆ ಕಲರ್ನಲ್ಲಿ ಅಣ್ಣಾವ್ರ ಕಸ್ತೂರಿ ನಿವಾಸ

ಮೂಲ ಚಿತ್ರದ ನಿರ್ಮಾಪಕರಾದ ಕೆಸಿಎನ್ ಗೌಡರ ಪುತ್ರ ಕೆಸಿ ಮೋಹನ್ ಈ ಚಿತ್ರವನ್ನು ಬಣ್ಣದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಮೋಹನ್, "ಒರಿಜಿನಲ್ ಚಿತ್ರದ ಕಾರ್ಬನ್ ಕಾಪಿ ಇದಲ್ಲ. ಹಾಡುಗಳು ಚಿತ್ರದ ಪ್ರಮುಖ ಹೈಲೈಟ್. ಹಾಡುಗಳು ಹಾಗೂ ಸಂಭಾಷಣೆಗೆ ಡಿಟಿಎಸ್ ಅಳವಡಿಸಲಾಗಿದ್ದು ಪ್ರೇಕ್ಷಕರಿಗೆ ಸಮೃದ್ಧ ಅನುಭವ ನೀಡಲಿದೆ" ಎಂದಿದ್ದಾರೆ.
ಕಪ್ಪು ಬಿಳುಪಿನ 'ಕಸ್ತೂರಿ ನಿವಾಸ' ಚಿತ್ರ ಬಣ್ಣದ ಬೆಳಕಿನಲ್ಲಿ ಮತ್ತೊಮ್ಮೆ ತೆರೆಕಾಣುತ್ತಿದ್ದು ಈ ಚಿತ್ರ ಮತ್ತೊಮ್ಮೆ ಪ್ರೇಕ್ಷಕರ ಮನಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿ ದೊರೈ ರಾಜ್ ಹಾಗೂ ಎಸ್ ಕೆ ಭಗವಾನ್ ನಿರ್ದೇಶಿಸಿದ್ದ ಈ ಚಿತ್ರವನ್ನು ಕೊಳ್ಳಲು ಆರಂಭದಲ್ಲಿ ವಿತರಕರು ಹಿಂದೇಟು ಹಾಕಿದ್ದರು. ಆದರೆ ಒಂದೇ ವಾರದಲ್ಲಿ ಸುಮಧುರ ಹಾಡುಗಳು, ಕತೆ, ಅಣ್ಣಾವ್ರ ಅಭಿನಯದಿಂದ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು. ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದ್ದು ಇತಿಹಾಸ.
ಚಿತ್ರದ ಪಾತ್ರವರ್ಗದಲ್ಲಿ ಜಯಂತಿ, ಆರತಿ ಹಾಗೂ ದಿವಂಗತ ಕೆಎಸ್ ಅಶ್ವತ್ಥ್ ಮುಂತಾದವರಿದ್ದರು. ಪಿಬಿ ಶ್ರೀನಿವಾಸ್ ಹಾಗೂ ಪಿ ಸುಶೀಲಾ ಹಾಡಿರುವ "ನೀ ಬಂದು ನಿಂತಾಗ..." ಹಾಗೂ ಪಿಬಿಎಸ್ ಅವರ "ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು..." ಹಾಡುಗಳ ಜನಪ್ರಿಯತೆ ಇಂದಿಗೂ ಮಾಸಿಲ್ಲ. ಚಿತ್ರದ ಜನಪ್ರಿಯತೆಗೆ ಇದೇ ಸಾಕ್ಷಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











