ಮಹೇಂದರ್ ಸಾರಥ್ಯದಲ್ಲಿ ವಿಜಯ್ 'ವೀರಬಾಹು'
ಆಕ್ಷನ್ ಹೀರೋ ವಿಜಯ್ ಇದೀಗ 'ವೀರಬಾಹು'. ಸತ್ಯ ಹರಿಶ್ಚಂದ್ರ ಕತೆಯಲ್ಲಿನ ಸ್ಮಶಾನ ಕಾಯುವ ಪಾತ್ರದ ಹೆಸರು ವೀರಬಾಹು. ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ವೀರಬಾಹು ಪಾತ್ರವನ್ನು ನಟ ದಿಗ್ಗಜ ದಿವಂಗತ ಎಂ ಪಿ ಶಂಕರ್ ಅದ್ಭುತವಾಗಿ ಮಾಡಿದ್ದರು. ಅಂಥಹ 'ವೀರಬಾಹು' ಹೆಸರಿನ ಚಿತ್ರಕ್ಕೆ ವಿಜಯ್ ಈಗ ನಾಯಕ ನಟ.
ವೈಯಕ್ತಿಕ ಸಮಸ್ಯೆಗಳಿಂದ ಕೊಂಚ ಕಾಲ ಮರೆಯಾಗಿದ್ದ ಎಸ್. ಮಹೇಂದರ್ ಈ ಚಿತ್ರದ ಮೂಲಕ ಮತ್ತೆ ನಿರ್ದೇಶಕನ ಹ್ಯಾಟ್ ಧರಿಸಿದ್ದಾರೆ. ಸಂದೇಶ್ ಕಂಬೈನ್ಸ್ ನ ಸಂದೇಶ್ ನಾಗರಾಜ್ ಈ ಚಿತ್ರದ ನಿರ್ಮಾಪಕರು. ಮಹೇಶ್ ಮತ್ತು ಸಂದೇಶ್ ನಾಗರಾಜ್ ಜೋಡಿಯಲ್ಲಿ ಬರುತ್ತಿರುವ ಆರನೇ ಚಿತ್ರವಿದು. ಮೌನರಾಗ, ಮೇಘ ಬಂತು ಮೇಘ, ಅಸುರ, ಚಂದ್ರೋದಯ ಮತ್ತು ಗೌಡ್ರು ಇವರಿಬ್ಬರ ಕಾಂಬಿನೇಷನಲ್ಲಿ ಬಂದ ಚಿತ್ರಗಳು.
ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲಿ ವೀರಬಾಹು ಸೆಟ್ಟೇರುವ ಸಾಧ್ಯತೆ ಇದೆ. ನಾಯಕಿಯ ಹುಡುಕಾಟ ಆರಂಭವಾಗಿದ್ದು ಹೊಸ ಮುಖದ ಅನ್ವೇಷಣೆಯಲ್ಲಿದ್ದಾರೆ ಮಹೇಂದರ್. ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳು ಪರಿಚಯಿಸುವ ಯೋಚನೆಯಲ್ಲಿದ್ದಾರೆ ಮಹೇಂದರ್. ಚಿತ್ರದ ಉಳಿದ ವಿವರಗಳು ಶೀಘ್ರದಲ್ಲೇ ಪ್ರಕಟವಾಗಲಿವೆ.
ಚಿತ್ರಕ್ಕೆ ಸಂಗೀತ ವಿ.ಹರಿಕೃಷ್ಣ. ಸೆಲ್ಯೂಟ್, ಐಪಿಸಿ ಸೆಕ್ಷನ್ 300 ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದಬಾಬು ನಿರಂಜನ್ ಛಾಯಾಗ್ರಹಣ ಈ ಚಿತ್ರಕ್ಕಿರುತ್ತದೆ. ತಮ್ಮ ವೃತ್ತಿಜೀವನದಲ್ಲಿ ಈ ಚಿತ್ರ ಮಹತ್ವದ ತಿರುವು ನೀಡಲಿದೆ ಎಂಬ ವಿಶ್ವಾಸದಲ್ಲಿ ಮಹೇಂದರ್ ಇದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











