ನವರಸನಾಯಕ ಜಗ್ಗೇಶ್ ಈಗ ಎಂಎಲ್ಸಿ

ನಟ ಜಗ್ಗೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ವಿಜಯಿಯಾಗಿದ್ದರು. ಆದರೆ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಅವರನ್ನು ನಂತರ ಕೆಎಸ್ಆರ್ಟಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಬಸ್ ಡೇ ಆಚರಣೆಯಲ್ಲಿ ತೊಡಗಿದ್ದ ಜಗ್ಗೇಶ್ ಅವರು ಸಹಜವಾಗಿ ಸಂತಸ ವ್ಯಕ್ತಪಡಿಸುತ್ತಾ ,ತಮ್ಮ ಆರಿಸಿರುವ ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರಿಗೆ ಋಣಿಯಾಗಿರುವೆ. ಜನ ಸೇವೆಗೆ ಪದವಿ, ಪಟ್ಟಕ್ಕಿಂತ ಮನಸ್ಸು ಮುಖ್ಯ. 28ವರ್ಷದ ಕಲಾಸೇವೆ ಸಾಕಷ್ಟು ಪಾಠ ಕಲಿಸಿದೆ, ಜನಸೇವೆಗೆ ನಾನು ಸದಾ ಸಿದ್ಧ ಎಂದು ಕನ್ನಡ ಸುಪುತ್ರ ಜಗ್ಗೇಶ್ ಘೋಷಿಸಿದರು.
ಕು.ಮಲ್ಲಾಜಮ್ಮ, ಪ್ರಕಾಶ್ ರಾಥೋಡ್ ಮತ್ತು ಚಂದ್ರಶೇಖರ ಕಂಬಾರ ಅವರುಗಳು ಕಳೆದ ಜ.20 ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಈ ಮೂರು ಸ್ಥಾನಗಳು ಖಾಲಿ ಉಳಿದಿದ್ದವು. ಹಿರಿಯ ಶಿಕ್ಷಣ ತಜ್ಞ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಪಿ.ವಿ. ಕೃಷ್ಣಭಟ್ ಅವರ ನೇಮಕ ಈ ಹಿಂದೆಯೇ ಬಹುತೇಕ ಖಚಿತವಾಗಿತ್ತು.
ನಟಿ ತಾರಾ ಕೂಡ ವಿಧಾನಪರಿಷತ್ ಗೆ ಪ್ರವೇಶದ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು.ಆದರೆ, ಚಲನಚಿತ್ರ ಕ್ಷೇತ್ರದ ಪ್ರತಿನಿಧಿಯಾಗಿ ಜಗ್ಗೇಶ್ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ತಾರಾ ಮೇಡಂಗೆ ಎಂಎಲ್ಸಿ ಪಟ್ಟ ಕನಸಾಗಲಿದೆ. ಯಡಿಯೂರಪ್ಪ ಅವರಿಗೆ ಒಕ್ಕಲಿಗ ಸಮುದಾಯದ ಪ್ರತಿನಿಧಿಸಲು ತಾರಾ ಅವರ ಆಯ್ಕೆ ಅನಿವಾರ್ಯವಾಗಿತ್ತು. ಆದರೆ, ಈಶ್ವರಪ್ಪ, ಅಶೋಕ ಸೇರಿದಂತೆ ಅನೇಕ ಪ್ರಭಾವಿ ನಾಯಕರು ಜಗ್ಗೇಶ್ ಅವರ ಹೆಸರು ಸೂಚಿಸಿದರು ಎನ್ನಲಾಗಿದೆ.


Click it and Unblock the Notifications











