ಮೊಗ್ಗಿನ ಮನಸು ಮತ್ತೊಮ್ಮೆ ಅರಳಲಿದೆ!
ಫಿಲಂಫೇರ್ ಪ್ರಶಸ್ತಿಗಳ ಬಂಪರ್ ಬೆಳೆಯಿಂದ ಉಲ್ಲಸಿತಗೊಂಡಿರುವ ಕೃಷ್ಣಪ್ಪ ಅಂಡ್ ಟೀಮ್ "ಮೊಗ್ಗಿನ ಮನಸು" ಚಿತ್ರವನ್ನು ಮರಳಿ ತೆರೆಕಾಣಿಸಲು ಸಿದ್ಧತೆ ನಡೆಸಿದೆ. 'ಮೊಗ್ಗಿನ ಮನಸು' ತೆರೆಕಂಡಿದ್ದೇ ಅನೇಕರಿಗೆ ಗೊತ್ತಿಲ್ಲ. ಚಿತ್ರ ಎದುರಿಸಿದ ಅಡೆತಡೆ ಒಂದೆರಡಲ್ಲ. ವಿವಾದಗಳಿಂದ ಸಿನಿಮಾ ತೆರೆಕಾಣುವುದು ವಿನಾಕಾರಣ ವಿಳಂಬವಾಯ್ತು. ಸೆನ್ಸಾರ್ನಿಂದ ಮತ್ತಷ್ಟು ತಡವಾಯ್ತು.
ಅಂತೂಇಂತೂ ಸಿನಿಮಾ ತೆರೆಕಂಡಿತು ಎಂದು ಸಮಾಧಾನದ ಉಸಿರು ಬಿಡುವ ಹೊತ್ತಿಗೆ, ಯಾವತ್ತೂ ಇಲ್ಲದ ಬಾಂಬ್ ದಾಳಿ ಬೆಂಗಳೂರಲ್ಲಿ ಸಂಭವಿಸಿತು. ಇವೆಲ್ಲ ಕಾರಣದಿಂದಾಗಿ 'ಮೊಗ್ಗಿನ ಮನಸು' ಹೆಚ್ಚು ಪ್ರೇಕ್ಷಕರನ್ನು ತಲುಪುವುದು ಸಾಧ್ಯವಾಗಲಿಲ್ಲ. ಈಗ ಪ್ರಶಸ್ತಿಗಳ ಕಾರಣದಿಂದಾಗಿ ಚಿತ್ರ ಸುದ್ದಿಯಲ್ಲಿದೆ. ಈ ಸಂದರ್ಭವನ್ನು ಬಳಸಿಕೊಂಡು ಚಿತ್ರವನ್ನು ರಾಜ್ಯದ ವಿವಿಧೆಡೆ ಮತ್ತೆ ತೆರೆಕಾಣಿಸುತ್ತೇವೆ ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ.
ಮೊಗ್ಗಿನ ಮನಸು ಚಿತ್ರ ಹಣಕಾಸಿನ ದೃಷ್ಟಿಯಿಂದ ಕೈಕಚ್ಚಿತು ಎನ್ನುವುದನ್ನು ಶಶಾಂಕ್ ಒಪ್ಪುವುದಿಲ್ಲ. ನಾವು ನಿರೀಕ್ಷಿಸಿದಂತೆ ಕೋಟಿಗಟ್ಟಲೆ ಲಾಭ ಸಂಪಾದಿಸಲಿಲ್ಲ. ಸಣ್ಣ ಪ್ರಮಾಣದ ಲಾಭವಂತೂ ಬಂದಿದೆ ಎನ್ನುವುದು ಅವರ ಅನಿಸಿಕೆ. ಗುಣಮಟ್ಟದ ಚಿತ್ರ ಮಾಡಿದರೆ ಪ್ರತಿಫಲ ಇದ್ದೇ ಇದೆ ಎನ್ನುವುದನ್ನು ಮೊಗ್ಗಿನ ಮನಸು ಸಾಬೀತುಪಡಿಸಿದೆ. ಈ ಚಿತ್ರಕ್ಕೆ ದೊರಕಿರುವ ಜನಮನ್ನಣೆ ಹಾಗೂ ಬಂಪರ್ ಪ್ರಶಸ್ತಿಗಳು ನಮಗೆಲ್ಲ ಖುಷಿ ತಂದಿದೆ" ಎಂದು ಶಶಾಂಕ್ ನಗುತ್ತಾರೆ.
ಅಂದಹಾಗೆ, ಶಶಾಂಕ್ರ ಹೊಸಚಿತ್ರ 'ಕೃಷ್ಣನ್ ಲವ್ ಸ್ಟೋರಿ' ಅಕ್ಟೋಬರ್ನಲ್ಲಿ ಸೆಟ್ಟೇರಲಿದೆ. ರಾವಣ ಚಿತ್ರದ ನಿರ್ಮಾಪಕರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ತಾಜಮಹಲ್ನ ಅಜಯ್ ನಾಯಕ. ರಾಧಿಕಾ ಪಂಡಿತ್ ನಾಯಕಿ ಆಗುತ್ತಾರಾ? ಗಾಂಧಿನಗರದ ಪ್ರಕಾರ ಹೌದು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











