ಯಶ್, ಮೋಹಕ ನಟಿ ಹರಿಪ್ರಿಯಾಗೆ ರೋಟರಿ ಪ್ರಶಸ್ತಿ
ಸಮಾಜದ ಎಲ್ಲ ಸ್ಥರಗಳ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ರೋಟರಿ ಸಂಸ್ಥೆ ಇತ್ತೀಚೆಗೆ ನಮ್ಮ ಸಿನಿಮಾ ಕ್ಷೇತ್ರದತ್ತಲೂ ಕಣ್ಣು ಹಾಯಿಸುತ್ತಿದೆ. ಚಿತ್ರರಂಗದಲ್ಲಿ ಸಾಧನೆ ಮಾಡಿರುವ ನಾಯಕ ನಾಯಕಿಯರನ್ನು ಗೌರವಿಸುತ್ತಾ ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದೆ.
ಈಹಿಂದೆ 2008 ರಲ್ಲಿ ರಮೇಶ್ ಅರವಿಂದ್ ಮತ್ತು ಸುಧಾರಾಣಿ, 2006ರಲ್ಲಿ ಅಜಯ್ ರಾವ್ ಮತ್ತು ಪೂಜಾ ಗಾಂಧಿ ಹಾಗೂ 2010 ರಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯಾರನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು.ಈ ಸಾಲಿನ ಪ್ರಶಸ್ತಿ ಯುವ ನಟ ಯಶ್ ಮತ್ತು ಮೋಹಕ ಚೆಲುವೆ ಹರಿಪ್ರಿಯಾಗೆ ಸಂದಿದೆ.
ಮೊನ್ನೆ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಯುವ ಜೋಡಿಗೆ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಗಳನ್ನು ನೀಡಲು ದಕ್ಷಿಣ ಭಾರತದ ಹಿರಿಯ ನಟಿ ಜಯಂತಿ ಆಗಮಿಸಿದ್ದರು. ಈ ಪ್ರಶಸ್ತಿಯೊಂದಿಗೆ ಹರಿಪ್ರಿಯಾ ಮತ್ತು ಯಶ್ಗೆ ರೋಟರಿ ಸಂಸ್ಥೆಯ ಸದಸ್ಯತ್ವವನ್ನೂ ನೀಡಲಾಯಿತು.
ರಂಗಭೂಮಿ ಹಿನ್ನೆಲೆಯಿಂದ ಬಂದು 'ಮೊಗ್ಗಿನ ಮನಸು' ಚಿತ್ರದ ಮೂಲಕ ನಾಯಕರಾಗಿ ನಂತರ ರಾಕಿ, ಕಳ್ಳರ ಸಂತೆ, ಮೊದಲಾಸಲ ಮತ್ತು ಈಗಷ್ಟೇ ಸಿದ್ಧವಾಗಿರುವ ರಾಜಧಾನಿ, ಕಿರಾತಕ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಯಶ್ಗೆ ಇದು ಎರಡನೇ ಸಿನಿಮಾ ಪ್ರಶಸ್ತಿಯಂತೆ. ಹಾಗೆಯೇ ಹರಿಪ್ರಿಯಾಗೆ ಕೂಡಾ ಇದು ಎರಡನೇ ಪ್ರಶಸ್ತಿ.
ತೆಲುಗು ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಹರಿಪ್ರಿಯಾಗೆ 2010ರ ಸಾಲಿನ ಪ್ರತಿಷ್ಠಿತ ಪುರಸ್ಕಾರವೊಂದು ಲಭಿಸಿದೆ. ಇದರ ಬೆನ್ನಿಗೇ ಈಗ ರೋಟರಿ ಸಂಸ್ಥೆಯ ಹೆಮ್ಮೆಯ ಪ್ರಶಸ್ತಿ ಕೂಡಾ ಕೈ ಸೇರಿದೆ. "ಕನ್ನಡದ ಹುಡುಗಿಯರನ್ನು ಹೀಗೆ ಗುರುತಿಸಿ ಗೌರವಿಸಿದರೆ ನಮಗೆ ಇನ್ನೂ ಹೆಚ್ಚಿನ ಉತ್ಸಾಹ, ಹುಮ್ಮಸ್ಸು ಉಂಟಾಗುತ್ತದೆ. ನನಗೆ ಈ ಪ್ರಶಸ್ತಿ ದೊರಕಿರುವುದು ಅತೀವವಾದ ಸಂತೋಷವನ್ನು ಉಂಟು ಮಾಡಿದೆ ಎಂದು ಹರಿಪ್ರಿಯಾ ತಮ್ಮ ಮನದಾಳದ ಸಂತೋಷವನ್ನು ವ್ಯಕ್ತಪಡಿಸಿಕೊಂಡರು.
ಕನ್ನಡ ಚಿತ್ರರಂಗದ ನೈಜ ಪ್ರತಿಭೆಗಳಿಗೆ ಈ ಪ್ರಶಸ್ತಿಗಳು ದೊರಕುವುದರ ಹಿಂದೆ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪನವರ ಶ್ರಮ ದೊಡ್ಡದು. ಖ್ಯಾತ ಉದ್ಯಮಿ, ಶಿಕ್ಷಣ ಸಂಸ್ಥೆಗಳ ನೇತಾರರಾಗಿರುವ ಮುರಳೀಧರ ಹಾಲಪ್ಪನವರಿಗೆ ಕನ್ನಡ ಚಿತ್ರರಂಗದ ಮೇಲೆ ಅತೀವವಾದ ಕಾಳಜಿ ಮತ್ತು ಅಭಿಮಾನ.
ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುವ ಮುರಳೀಧರ ಹಾಲಪ್ಪ ಎಲೆಮರೆ ಕಾಯಿಯಂತೆ ನಿಂತು ಕನ್ನಡ ಚಿತ್ರರಂಗವನ್ನು ಪೋಷಿಸುತ್ತಿದ್ದಾರೆ. ಈ ಹಿಂದೆ 'ಸೈನೆಡ್' ಎಂಬ ಸದಭಿರುಚಿಯ ಮತ್ತು ಅಪರೂಪದ ಸಿನಿಮಾವನ್ನು ನಿರ್ಮಿಸಿದ ಕೀರ್ತಿ ಕೂಡಾ ಮುರಳೀಧರ ಹಾಲಪ್ಪನವರಿಗೆ ಸಲ್ಲುತ್ತದೆ.


Click it and Unblock the Notifications











