ಕೃಷ್ಣನ್ ಲವ್ ಸ್ಟೋರಿ ನೋಡೋಕೆ ರೆಡಿನಾ?
ಮೊಗ್ಗಿನ ಮನಸ್ಸು ಚಿತ್ರ ನಿರ್ದೇಶಕ ಶಶಾಂಕ್ ಸಹಜವಾಗೇ ಉಲ್ಲಸಿತರಾಗಿದ್ದಾರೆ. ಅವರ ಸಿಕ್ಸರ್, ಮೊಗ್ಗಿನ ಮನಸ್ಸು ನಂತರದ ಮೂರನೇ ಚಿತ್ರ ಕೃಷ್ಣನ್ ಲವ್ ಸ್ಟೋರಿ ತೆರೆಗೆ ಬರಲು ಸಿದ್ಧವಾಗಿದೆ. ಅಲ್ಪ ಸ್ವಲ್ಪ ಕಿರಿಕಿರಿ ಸನ್ನಿವೇಶಗಳನ್ನು ಹೊರತುಪಡಿಸಿದರೆ ಇದು ಉತ್ತಮ ಪ್ರೇಮಕಥೆಯುಳ್ಳ ಚಿತ್ರ ಎಂದು ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಜೂ.18 ರಂದು ರಾಜ್ಯಾದ್ಯಾಂತ ಚಿತ್ರ ಬಿಡುಗಡೆಯಾಗಲಿದೆ.
ಮೊಗ್ಗಿನ ಮನಸ್ಸು ಚಿತ್ರಕ್ಕಿಂತ ಕೊಂಚ ಭಿನ್ನವಾದ ಆದರೆ ನೈಜವಾದ ಪ್ರೇಮಕಥೆಯನ್ನು ಈ ಚಿತ್ರ ಹೊಂದಿದೆ. ನನ್ನ ಸ್ನೇಹಿತರೊಬ್ಬರ ಜೀವನದಲ್ಲಿ ನಡೆದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆದಿದ್ದೇನೆ. ಕೃಷ್ಣನ್ ಲವ್ ಸ್ಟೋರಿ ಚಿತ್ರದ ಕ್ಲೈಮಾಕ್ಸ್ ಹೈಲೇಟ್ ಆಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶಶಾಂಕ್ ವ್ಯಕ್ತಪಡಿಸಿದರು.
ಮಡಿಕೇರಿ, ಸಾಗರ, ಕುಮಟಾ, ಬೆಂಗಳೂರಲ್ಲದೆ ದಕ್ಷಿಣದ ಮೂರು ರಾಜ್ಯಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ನಾನು ಗೀತ ಸಾಹಿತ್ಯದ ಹೊಣೆ ಹೊತ್ತಿದ್ದೇವೆ. ಮುಸ್ಸಂಜೆ ಮಾತು ಖ್ಯಾತಿಯ ವಿ ಶ್ರೀಧರ್ ಸಂಗೀತ ಆಗಲೆ ಜನ ಮನಗೆಲ್ಲುತ್ತಿದೆ ಎಂದು ಶಶಾಂಕ್ ಹೇಳಿದರು.
ಶಶಾಂಕ್ ಅವರ ಲಕ್ಕಿ ಗರ್ಲ್ ರಾಧಿಕಾ ಪಂಡಿತ್ ಜೊತೆಗೆ ಅಜಯ್ ರಾವ್ ಅವರು ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರ ಯುವ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.


Click it and Unblock the Notifications











