ಡಿಸೆಂಬರ್10ರಿಂದ ಕನ್ನಡ ಸಿನಿಮಾ ತಾರೆಗಳ ಹರಾಜು
ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರ ಗೈರುಹಾಜರಿ ನಡುವೆಯೇ ತಾರೆಗಳ ಕ್ರಿಕೆಟ್ ಲೀಗ್ಗೆ ಮಂಗಳಾರ (ಡಿ.7) ಸಂಜೆ ಚಾಲನೆ ನೀಡಲಾಯಿತು. ವಿಂಡ್ಸರ್ ಮ್ಯಾನರ್ ಪಂಚತಾರಾ ಹೋಟೆಲ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಂಬರೀಷ್, ದೊಡ್ಡಣ್ಣ, ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ, ರಾಘವೇಂದ್ರ ರಾಜ್ ಕುಮಾರ್, ರಾಕ್ ಲೈನ್, ತಾರಾ ಸೇರಿದಂತೆ ಸಿಸಿಎಲ್ ಪದಾಧಿಕಾರಿಗಳು ಮಾತ್ರ ಉಪಸ್ಥಿತರಿದ್ದರು.
"ಕನ್ನಡ ಚಿತ್ರರಂಗದ ಉಳಿದ ಕಲಾವಿದರು ಯಾರು ಬಂದಿಲ್ಲ ಎಂದು ಪತ್ರಕರ್ತರು ಅನ್ಯತಾ ಭಾವಿಸಬಾರದು. ಕೇವಲ ಎರಡೇ ಎರಡು ದಿನ ಸಮಯ ಸಿಕ್ಕ ಕಾರಣ ದಿಢೀರೆಂದು ಕಾರ್ಯಕ್ರಮನ್ನು ಆಯೋಜಿಸಲಾಯಿತು. ಹಾಗಾಗಿ ಉಳಿದ ಕಲಾವಿದರನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ" ಎಂದು ಕಲಾವಿದರ ಸಂಘದ ಅಧ್ಯಕ್ಷ ರೆಬಲ್ ಸ್ಟಾರ್ ಅಂಬರೀಷ್ ಸಮರ್ಥನೆ ನೀಡಿದರಾದರೂ, ಪತ್ರಕರ್ತರ ಮುಖದಲ್ಲಿ ಮಾತ್ರ ಅನುಮಾನ ಗೆರೆ ಹಾಗೆ ಉಳಿಯಿತು.
ತಾರೆಗಳ ಕ್ರಿಕೆಟ್ ಲೀಗ್ (ಸಿಸಿಎಲ್-Celebrity Cricket League) ಜನವರಿಯಿಂದ ಆರಂಭವಾಗಲಿದ್ದು ಕನ್ನಡ ಸಿನಿಮಾ ತಾರೆಗಳ ಹರಾಜು ಪ್ರಕ್ರಿಯೆ ಡಿಸೆಂಬರ್ 10ರಿಂದ ಆರಂಭವಾಗಿ ಡಿಸೆಂಬರ್ 15ಕ್ಕೆ ಮುಗಿಯಲಿದೆ. ಬಿಡ್ ಮೊತ್ತವನ್ನು ಹತ್ತು ವರ್ಷಗಳ ಅವಧಿಗೆ ಕನಿಷ್ಠ ರು.17 ಕೋಟಿಗೆ ನಿಗದಿಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಿಸಿಎಲ್ ನಿರ್ದೇಶಕ ಇಂದೂರಿ ವಿಷ್ಣುವರ್ಧನ್ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಲಾವಿದರ ಸಂಘದ ಅಧ್ಯಕ್ಷ ರೆಬಲ್ ಸ್ಟಾರ್ ಅಂಬರೀಷ್ ಮಾತನಾಡುತ್ತಾ, ಕನ್ನಡ ಸಿನಿಮಾ ತಾರೆಗಳ ತಂಡಕ್ಕೆ ಸುದೀಪ್ ನಾಯಕತ್ವ ವಹಿಸಲಿದ್ದಾರೆ. ನಮ್ಮ ನಿಮ್ಮೆಲ್ಲರ ಮಗ, ಕರ್ನಾಟಕದ ಮಗ ಪುನೀತ್ ರಾಜ್ ಕುಮಾರ್ ಅವರು ಐಕಾನ್ ಆಟಗಾರನಾಗಿ ಆಡಲಿದ್ದಾರೆ ಎಂದರು.
ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮಾರ್ಗದಶನದಲ್ಲಿ ನಮ್ಮ ತಂಡ ಮುನ್ನಡೆಯಲಿದೆ. ಬಹುಶಃ ಅವರನ್ನೇ ನಮ್ಮ ತಂಡಕ್ಕೆ ಕೋಚ್ ಆಗಲು ವಿನಂತಿಸಿಕೊಳ್ಳಲಾಗುತ್ತದೆ. ಕೆಎಸ್ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಮಾರ್ಗದರ್ಶನ ಸಿಸಿಎಲ್ಗೆ ಇರುತ್ತದೆ. ನಮ್ಮ ತಂಡದ ಸಮವಸ್ತ್ರವನ್ನು ಚೆನ್ನೈನಲ್ಲಿ ಉದ್ಘಾಟಿಸಲಾಗುತ್ತದೆ ಎಂದು ಹೇಳಿ ಅಂಬಿ ತಮ್ಮ ಎರಡು ಮಾತುಗಳನ್ನು ಮುಗಿಸಿದರು.
ಬಳಿಕ ಮಾತನಾಡಿದ ತಂಡದ ನಾಯಕ ಸುದೀಪ್, ವರ್ಷದ 365ದಿನವೂ ಬಣ್ಣ ಹಚ್ಚಿಕೊಂಡು ಕೆಲಸ ಮಾಡುತ್ತೇವೆ. ಕೆಲ ದಿನಗಳ ಮಟ್ಟಿಗೆ ಮೇಕಪ್ ಇಲ್ಲದೆ ಕಲಾವಿದರೆಲ್ಲಾ ಒಟ್ಟಿಗೆ ಕಾಣಿಸಲಿದ್ದೇವೆ. ಉತ್ತಮ ಆಟವಾಡಲು ಬದ್ಧರಾಗಿರುವುದಾಗಿ ಸುದೀಪ್ ವಿಶ್ವಾಸ ವ್ಯಕ್ತಪಡಿಸಿದರು. ತಂಡದಲ್ಲಿ ಗಣೇಶ್, ದರ್ಶನ್ ಸೇರಿದಂತೆ ಎಲ್ಲರೂ ಇರುತ್ತಾರೆ. ಇನ್ನೂ ತಂಡದ ಆಯ್ಕೆ ನಡೆಯುತ್ತಿದೆ. ಅಂತಿಮವಾದ ಕೂಡಲೆ ಸಂಪೂರ್ಣ ವಿವರಗಳನ್ನು ನೀಡುವುದಾಗಿ ಹೇಳಿದರು.
ಕ್ರಿಕೆಟ್ ನೋಡುವುದೆಂದರೆ ನನಗೆ ಬಹಳ ಇಷ್ಟ. ಆಟ ಬೇಕೆಂಬ ಆಸೆಯೂ ಬೆಟ್ಟದಷ್ಟಿದೆ. ಆದರೆ ಏನು ಮಾಡುವುದು ನನಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಇನ್ನು ಮೇಲೆ ಕ್ರಿಕೆಟ್ ಆಡುವುದನ್ನು ಶುರು ಹಚ್ಚಿಕೊಳ್ಳಲಿದ್ದೇನೆ ಎಂದು ಪುನೀತ್ ರಾಜ್ ಕುಮಾರ್ ಹೇಳಿದರು. ಸುದೀಪ್ ಅವರು ತಂಡದಲ್ಲಿ ನನಗೆ 11ನೇ ಆಟಗಾರನಾಗಿ ಆಡುವ ಅವಕಾಶ ಕೊಟ್ಟರೆ ಸಾಕು ಎಂದು ಉಪೇಂದ್ರ ಹಾಸ್ಯ ಚಟಾಕಿ ಸಿಡಿಸಿದರು.
ಬೆಂಗಳೂರಿನಲ್ಲಿ ಆರಂಭವಾಗುವ ಸಿಸಿಎಲ್ ಪಂದ್ಯಾವಳಿ ಫೈನಲ್ಸ್ ಹೈದರಾಬಾದ್ನಲ್ಲಿ ನಡೆಯಲಿದೆ. ಜನವರಿ 22 ಹಾಗೂ 23ರಂದು ಸಿಸಿಎಲ್ ಆರಂಭದ ಕೆಲ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಜನವರಿ 29 ಹಾಗೂ 30ರಂದು ಹೈದರಾಬಾದಿನಲ್ಲಿ ಫೈನಲ್ಸ್ ನಡೆಯಲಿದೆ. ಒಂದೇ ವೇದಿಕೆಯಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಬಾಲಿವುಡ್ ನಟರನ್ನು ನೋಡುವ ಅವಕಾಶ ಪ್ರೇಕ್ಷಕರ ಪಾಲಿಗೆ ರಸದೌತಣ ನೀಡಲಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಹೆಸರುಗಳು ಹೀಗಿವೆ; ಬೆಂಗಳೂರು ರಾಯಲ್ಸ್, ಮುಂಬೈಹೀರೋಸ್, ತೆಲುಗು ಟೈಗರ್ಸ್, ಚೆನ್ನೈ ಸ್ಟಾರ್ಸ್ ಹಾಗೂ ಕೊಚ್ಚಿ ಕಿಂಗ್ಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಏಕೈಕ ಮಹಿಳೆ ತಾರಾ ಮೇಡಂ ಯಾಕೋ ಏನೋ ಏನನ್ನೂ ಮಾತನಾಡಲಿಲ್ಲ. ರಾಘವೇಂದ್ರ ರಾಜ್ ಕುಮಾರ್ ಸಹ ಮೌನಕ್ಕೆ ಶರಣಾಗಿದ್ದರು. ಒಟ್ಟಿನಲ್ಲಿ ಎಲ್ಲವೂ ತರಾತುರಿಯಲ್ಲಿ ಮುಗಿಸಿ ಕಾರ್ಯಕ್ರಮವನ್ನು ಬರಕಾಸ್ತುಗೊಳಿಸಲಾಯಿತು.


Click it and Unblock the Notifications











