ಬೆಂಗಳೂರಿನಲ್ಲಿ ಡಯಾನ ಪ್ರೀತಿ ಪ್ರೇಮ ಪ್ರಣಯ
ಕವಿ ಕ್ರಿಯೇಟರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಡಯಾನ' ಚಿತ್ರಕ್ಕೆ ಬೆಂಗಳೂರಿನಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ನಾಯಕ ಹಾಗೂ ನಾಯಕಿಯರ ಪ್ರೀತಿಪ್ರೇಮದ ಮಧುರ ಕ್ಷಣದ ದೃಶ್ಯಗಳು, ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಸನ್ನಿವೇಶಗಳು ಹಾಗೂ 'ಡಯಾನ'ನನ್ನು ಮನೆಯಿಂದ ಹೊರ ಹಾಕುವ ಸನ್ನಿವೇಶ ಸೇರಿದಂತೆ ಹಲವು ಕೌತುಕ ಸನ್ನಿವೇಶಗಳು ಈ ಹಂತದಲ್ಲಿ ಚಿತ್ರೀಕರಣಗೊಂಡಿದೆ.
ಇದರೊಂದಿಗೆ ಚಿತ್ರದ ಶೇಕಡ 25ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಕವಿರಾಜೇಶ್ ತಿಳಿಸಿದ್ದಾರೆ. ಧ್ರುವ, ಸಂಗೀತಾಶೆಟ್ಟಿ, ಸನಾತನಿ, ಪ್ರಮೀಳಾಜೋಷಾಯಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಗೆದ್ದು ಬಾ ಇಂಡಿಯಾ ಎಂಬ ಘೋಷಣೆಯೊಂದಿಗೆ ಒಲಂಪಿಕ್ ಕ್ರೀಡಾಕೂಟದ ಕಥೆಯನ್ನಾಧರಿಸಿದ 'ಡಯಾನ' ಚಿತ್ರಕ್ಕೆ ಕವಿರಾಜೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಐದು ಗೀತೆಗಳನ್ನೊಳಗೊಂಡಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಒಂದು ಗೀತೆಗೆ ಹೈದರಾಬಾದ್ನ ರಮ್ಯ ಹೆಜ್ಜೆ ಹಾಕಲಿದ್ದಾರೆ.
ಎಂ.ಆರ್.ಚೌಹಾಣ್ ಛಾಯಾಗ್ರಹಣ, ಶ್ರೀನಿವಾಸ ಪಿ ಬಾಬು ಸಂಕಲನ, ಮತ್ತು ಥಾಮಸ್ ಅವರ ನಿರ್ಮಾಣನಿರ್ವಹಣೆ 'ಡಯಾನ' ಚಿತ್ರಕ್ಕಿದೆ. ಧ್ರುವ, ಸಂಗೀತಾ ಶೆಟ್ಟಿ, ಸನಾತನಿ, ಪ್ರಮೀಳಾಜೋಷಾಯಿ, ಡಾ.ಶರ್ಮ, ಚಿತ್ರಾಶೆಣೈ, ಡಿಂಗ್ರಿನಾಗರಾಜ್ ಮುಂತಾದವರಿದ್ದಾರೆ.


Click it and Unblock the Notifications











