'ಬಳೆಗಾರ'ನಯಶಸ್ಸಿಗೆ ಕಪಾಲಿಯಲ್ಲಿ ಹೋಮ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಾಗ್ಯದ ಬಳೆಗಾರ' ಚಿತ್ರ ಶುಕ್ರವಾರ (ಸೆ.11) ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಶಿವಣ್ಣನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ ಶುಕ್ರವಾರ ಬೆಳಗ್ಗೆ 6.30ಕ್ಕೆ ಕಪಾಲಿ ಚಿತ್ರಮಂದಿರದಲ್ಲಿ 'ಭಾಗ್ಯದ ಬಳೆಗಾರ' ಯಶಸ್ವಿಯಾಗಲಿ ಎಂದು ಹೋಮ ಏರ್ಪಡಿಸಲಾಗಿದೆ.
ಇದಿಷ್ಟಕ್ಕೇ ಅಭಿಮಾನಿಗಳ ಸುಮ್ಮನಾಗಿಲ್ಲ. ಗಂಡುಗಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕಲಾ ಕಂಠೀರವ ಶಿವರಾಜ್ ಅಭಿಮಾನಿಗಳ ಸಂಘ ಭಾನುವಾರ(ಸೆ.13) ಕೆಂಪೇಗೌಡ ವೃತ್ತದಿಂದ ಕಪಾಲಿ ಚಿತ್ರಮಂದಿರಕ್ಕೆ ನಕ್ಷತ್ರಗಳ ಅದ್ದೂರಿ ಮೆರವಣಿಗೆಯನ್ನು ಹಮ್ಮಿಕೊಂಡಿದೆ. ಶಿವಣ್ಣನ ಕಟೌಟಿಗೆ ಭಾರಿ ಹೂವಿನ ಹಾರ ಸಮರ್ಪಿಸಿ ಸಿಡಿಮದ್ದುಗಳನ್ನು ಸಿಡಿಸುವುದಾಗಿ ಪ್ರಕಟಿಸಲಾಗಿದೆ.
ಕರ್ನಾಟಕ ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಸಂಘದ ವತಿಯಿಂದಲೂ ಇದೇ ರೀತಿಯ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಮೋದ್ ಚಿತ್ರ ಮಂದಿರಕ್ಕೆ ಭಾರಿ ನಕ್ಷತ್ರಗಳ ಮೆರವಣಿಗೆ ಹಾಗೂ ಶಿವಣ್ಣನ ಕಟೌಟಿಗೆ ಭಾರಿ ಹೂವಿನ ಹಾರಗಳನ್ನು ಸಮರ್ಪಿಸುವುದಾಗಿ ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೆ ಕಲಾ ಕಂಠೀರವ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ (ತಾವರೆಕೆರೆ) ಸುದ್ದಗುಂಟೆ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನಕ್ಕೆ ಅನ್ನದಾನ ಏರ್ಪಡಿಸಿದ್ದಾರೆ. ಇನ್ನುಳಿದಂತೆ ಮೈಸೂರು, ಮಂಡ್ಯದ ಹಾಗೂ ಹಾಸನದ ಅಭಿಮಾನಿಗಳು ನಕ್ಷತ್ರಗಳ ಮೆರವಣಿಗೆ ಮತ್ತು ಹೂವಿನ ಹಾರಗಳನ್ನು ಆಯಾ ಸ್ಥಳಗಳಲ್ಲಿ ಸಮರ್ಪಿಸಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











