ನಟಿ ಲೀಲಾವತಿ ತೋಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ತೊಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನೆಲಮಂಗಲದ ಮೈಲನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ (ಫೆ.11) ನಡೆದಿದೆ. ಈ ಘಟನೆಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಕಾಳು ಮೆಣಸು ಮತ್ತು ಅಡಕೆ ತೋಟ ಸಂಪೂರ್ಣವಾಗಿ ಭಸ್ಮವಾಗಿದೆ. ಸರಿ ಸುಮಾರು ರು. 1 ಲಕ್ಷ ಬೆಳೆ ಹಾನಿ ಸಂಭವಿಸಿರುವುದಾಗಿ ನಟ ವಿನೋದ್ ರಾಜ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಲೀಲಾವತಿ ಅವರ ಪುತ್ರ ಹಾಗೂ ನಟ ವಿನೋದ್ ರಾಜ್, "ಕಳೆದ ರಾತ್ರಿಯೇ ತೋಟಕ್ಕೆ ಬೆಂಕಿ ಹಂಚುವ ಪ್ರಯತ್ನ ನಡೆದಿದೆ. ಆದರೆ ಸ್ಥಳೀಯರು ಅವರನ್ನು ಓಡಿಸಿದ ಕಾರಣ ಅವರ ಆಟ ನಡೆಯಲಿಲ್ಲ. ಯಾರು ಯಾವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂಬುದು ನಮಗೆ ಗೊತ್ತಾಗಿಲ್ಲ" ಎಂದಿದ್ದಾರೆ.
ತನ್ನ ಕಣ್ಣೆದುರೇ ಬೆಳೆದ ತೋಟ ಭಸ್ಮವಾದ ಬಗ್ಗೆ ವಿನೋದ್ ರಾಜ್ ಅವರಿಗೆ ತೀವ್ರ ನೋವಾಗಿತ್ತು. ಘಟನೆ ಬಗ್ಗೆ ಅವರು ಭಾವುಕರಾಗಿ ಮಾತನಾಡುತ್ತಿದ್ದರು. ಕಷ್ಟಪಟ್ಟು ಬೆಳೆಸಿದ ತೋಟ ನಾಶ ಮಾಡಿದ ಬಗ್ಗೆ ಅವರು ಕೊಂಚ ವಿತಲಿತರಾಗಿದ್ದರು. "ನಾವು ಕರ್ನಾಟಕದಲ್ಲಿ ಇರುವುದು ಬೇಡ ಎಂದಾದರೆ ಹೇಳಿ ನಾವು ಬೇರೆ ಕಡೆಗೆ ಹೊರಟು ಹೋಗುತ್ತೇವೆ" ಎಂದು ನೊಂದು ನುಡಿದಿದ್ದಾರೆ.
ಕಳೆದ 18-20 ವರ್ಷದಿಂದ ತೋಟವನ್ನು ಬೆಳೆಸಿದ್ದೇವೆ. ತೋಟಕ್ಕೆ ಬೆಂಕಿ ಹಚ್ಚುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಅವರಿಗೆ ಏನು ಹೇಳಬೇಕು. ಭಸ್ಮವಾದ ಬೆಳೆಯನ್ನು ಕಂಡು ಅಮ್ಮ ಕಂಗಾಲಾಗಿದ್ದಾರೆ. ನಮ್ಮ ಪಾಡಿಗೆ ನಾವಿದ್ದೇವೆ. ಆದರೂ ನಮ್ಮನ್ನು ನೆಮ್ಮದಿಯಾಗಿ ಇರಲು ಯಾಕೆ ಬಿಡುತ್ತಿಲ್ಲ ಎಂದು ವಿನೋದ್ ರಾಜ್ ನೋವಿನಿಂದ ಹೇಳಿದರು.


Click it and Unblock the Notifications











