ಡೈರೆಕ್ಟರ್ ಗುರು ಎಲ್ರಿ? ಅವರ 'ಸ್ಪೆಷಲ್' ಏನಾಯ್ತು?
ಚಿತ್ರ ನಿರ್ದೇಶಕ ಗುರು ಪ್ರಸಾದ್ ಎಲ್ರಿ? ಅವರ 'ಡೈರೆಕ್ಟರ್ಸ್ ಸ್ಪೆಷಲ್' ಎಲ್ಲಿಯವರೆಗೂ ಬಂತು? ಎಂಬ ಪ್ರಶ್ನೆಗಳು ಅವರ ಅಭಿಮಾನಿ ಬಳಗದಿಂದ ತೂರಿಬರುತ್ತಿವೆ. ಸದ್ಯಕ್ಕೆ 'ನಾಡೋಡಿಗಳ್' ಚಿತ್ರಕ್ಕೆ ಸಂಭಾಷಣೆ ಹೆಣೆಯುವಲ್ಲಿ ಗುರು ಬಿಜಿಯಾಗಿದ್ದಾರೆ. ಹಾಗೆಯೇ ಗುರು ಚಿತ್ರವೊಂದರ ಪೋಷಕ ಪಾತ್ರದಲ್ಲಿ ಮಿಂಚಲಿದ್ದಾರೆ.
ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ತಮಿಳಿನ 'ನಾಡೋಡಿಗಳ್' ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಇನ್ನೂ ಕನ್ನಡ ಶೀರ್ಷಿಕೆ ಇಡದ ಈ ಚಿತ್ರಕ್ಕೆ ಗುರು ಸಂಭಾಷಣೆ ಬರೆದುಕೊಟ್ಟಿದ್ದಾರೆ. ಏತನ್ಮಧ್ಯೆ ಆಗಸ್ಟ್ 27ರಂದು ಸೆಟ್ಟೇರಿದ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಕ್ಕೆ ಎರಡು ಹೊಸ ಮುಖಗಳನ್ನು ಆಯ್ಕೆ ಮಾಡಿದ್ದಾರೆ.
ಈ ಇಬ್ಬರು ಹೆಸರುಗಳನ್ನು ಮಾತ್ರ ಗುರು ಗುಟ್ಟಾಗಿಟ್ಟಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 99ನೇ ಚಿತ್ರ 'ಮೈಲಾರಿ'ಗೂ ಗುರು ಕೆಲಸ ಮಾಡಿದ್ದಾರೆ. ಇದಾದ ಬಳಿಕ ಅವರು ಕೋಮಲ್ ಅವರ 'ಕಳ್ ಮಂಜ' ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ.
ಇವೆಲ್ಲಾ ಕೆಲಸಗಳು ಮುಗಿದ ಬಳಿಕವಷ್ಟೆ ಅವರ 'ಡೈರೆಕ್ಟರ್ಸ್ ಸ್ಪೆಷಲ್'ಗೆ ಜೀವ ಬರಲಿದೆ. ಕಾರಣಾಂತರಗಳಿಂದ ಕೋಮಲ್ ಮತ್ತು ಗುರು ಸಂಬಂಧಗಳಿಗೆ ಕಲ್ಲು ಬಿದ್ದಿತ್ತು. 'ಕಳ್ ಮಂಜ' ರೂಪದಲ್ಲಿ ಈಗ ಎಲ್ಲವೂ ಸರಿಹೋಗಿದ್ದು ಈ ಚಿತ್ರದಲ್ಲಿ ಗುರು ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.


Click it and Unblock the Notifications











