ಅಕ್ಟೋಬರ್ 19ರಿಂದ ದರ್ಶನ್ ಸಾರಥಿ ಜೈತ್ರಯಾತ್ರೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣದಿಂದ ಭರ್ಜರಿ ಲಾಭವಾಗಿದ್ದು ನಿರ್ಮಾಪಕ ಸತ್ಯ ಪ್ರಕಾಶ್ ಅವರಿಗೆ ಎಂಬುದರಲ್ಲಿ ಎರಡು ಮಾತಿಲ್ಲ. ಡಬ್ಬದಲ್ಲೆ ಜನಗಣಮನ ಜಪಿಸುತ್ತಾ ಕೂತಿದ್ದ 'ಸಾರಥಿ' ಚಿತ್ರ ದರ್ಶನ್ ಜೈಲು ಸೇರಿದ ಕೂಡಲೆ ಬಿಡುಗಡೆ ಮಾಡುವ ಮೂಲಕ ಸತ್ಯ ಪ್ರಕಾಶ್ ಜಾಣತನ ತೋರಿದರು.
ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಸಹಾನುಭೂತಿಯ ಅಲೆಯಲ್ಲಿ ತೇಲುತ್ತಿದ್ದ ದರ್ಶನ್ ಅಭಿಮಾನಿಗಳು ಧಬ ಧಬ ಎಂದು ಮುಗಿಬಿದ್ದು ಚಿತ್ರವನ್ನು ನೋಡಿದರು. ಬಾಕ್ಸಾಫೀಸಿನಲ್ಲೂ ಲಕ್ಷ್ಮಿ ಝಣ ಝಣ ಸದ್ದು ಮಾಡಿದಳು. ಇದನ್ನು ಜೈಲಿನಲ್ಲಿದ್ದ ದರ್ಶನ್ ಕೇಳಿ ಆನಂದ ತುಂದಿಲರಾದರು.
ಇದೇ ಖುಷಿಯಲ್ಲಿರುವ 'ಸಾರಥಿ' ಚಿತ್ರತಂಡ ಅಕ್ಟೋಬರ್ 19ರಂದು ಜೈತ್ರಯಾತ್ರೆ ನಡೆಸಲು ಉದ್ದೇಶಿಸಿದೆ. ಅಂದರೆ ಇದು ಎಲ್ ಕೆ ಆದ್ವಾನಿ ರಥಯಾತ್ರೆ ತರಹವೇನು ಇರಲ್ಲ. ಇದನ್ನು ರೋಡ್ ಶೋ ಎನ್ನಬಹುದು. ತಮ್ಮ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಚಿತ್ರತಂಡದ ಕಲಾವಿದರು, ತಂತ್ರಜ್ಞರು ಥ್ಯಾಂಕ್ಸ್ ಹೇಳಲಿದ್ದಾರೆ.
ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಬಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಜೈತ್ರಯಾತ್ರೆ ಆರಂಭವಾಗಲಿದೆ. ಅಲ್ಲಿಂದ ಅಭಿಮಾನಿಗಳ ಕಡೆಗೆ ಕೈಬೀಸುತ್ತಾ ಬೆಂಗಳೂರು ತುಮಕೂರು ರಸ್ತೆಯ ಮೂಲಕ ರಥಯಾತ್ರೆ ಸಾಗಲಿದೆ. ದಾರಿಯುದ್ದಕ್ಕೂ ಅಭಿಮಾನಿಗಳಿಗೆ ದರ್ಶನ್ ಧನ್ಯವಾದಗಳನ್ನು ಸಮರ್ಪಿಸಲಿದ್ದಾರೆ.
ರಥಯಾತ್ರೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಗದಗ, ಧಾರವಾಡ, ಬೆಳಗಾವಿ, ಬಿಜಾಪುರ, ಗುಲ್ಬರ್ಗ ಜಿಲ್ಲೆಗಳ ಮೂಲಕ ಸಾಗಲಿದೆ. ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸಾರಥಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲೂ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ನಾಲ್ಕು ಮಾತುಗಳನ್ನು ಆಡಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











