ಗಾಂಧಿನಗರದಲ್ಲಿ ನವರಸ ನಾಯಕನಿಗಾದ ಕಹಿ ಅನುಭವ
ನವರಸ ನಾಯಕ ಜಗ್ಗೇಶ್ ಅವರಿಗೆ ಆಡಿಯೋ ಕಂಪನಿಯೊಂದು ಕಿವಿ ಮೇಲೆ ಹೂವಿಟ್ಟ ಘಟನೆಯಿದು.ಅವರಿಗೆ ಇತ್ತೀಚೆಗೆ ಗಾಂಧಿನಗರದಲ್ಲೊಂದು ಕಹಿ ಅನುಭವ ಎದುರಾಯಿತಂತೆ. ಈ ಘಟನೆಯಿಂದ ಅವರ ಮನಸಿಗೆ ತೀವ್ರ ನೋವೂ ಆಗಿದೆಯಂತೆ. ಈ ನೋವನ್ನು ಅವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ತೋಡಿಕೊಂಡರು. ಆಡಿಯೋ ಕಂಪನಿಗಳು ಮಾಡುತ್ತಿರುವ ಹಗಲು ದರೋಡೆ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಹೊಚ್ಚ ಹೊಸ ಚಿತ್ರ 'ಡಬಲ್ ಡೆಕ್ಕರ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಜಗ್ಗೇಶ್ ಆಡಿಯೋ ಕಂಪನಿಯೊಂದನ್ನು ಎಕ್ಕಾಮಕ್ಕಾ ತರಾಟೆಗೆ ತೆಗೆದುಕೊಂಡರು.
ಆರಂಭದಲ್ಲಿ ಪ್ರತಿಷ್ಠಿತ ಆಡಿಯೋ ಕಂಪನಿಯೊಂದರ ಮಾಲೀಕರು 'ಡಬಲ್ ಡೆಕ್ಕರ್' ಆಡಿಯೋ ರೈಟ್ಸ್ ತೆಗೆದುಕೊಳ್ಳುವುದಾಗಿ ಮಾತು ಕೊಟ್ಟಿದ್ದರು. ಕೊನೆಕೊನೆಗೆ ಈ ಆಡಿಯೋ ರೈಟ್ಸ್ನಲ್ಲಿ ಏನೂ ಗಿಟ್ಟುವುದಿಲ್ಲ ಎಂದು ಸಬೂಬು ನೀಡಿ ಕೈ ಎತ್ತಿದರು. ಕಡೆಗೆ ಅಕ್ಷಯ್ ಆಡಿಯೋ ಕಂಪನಿ ಮಾಲೀಕ ಟಿ ಪಿ ಸಿದ್ಧರಾಜು (ಲೂಸ್ ಮಾದ ಅಲಿಯಾಸ್ ಯೋಗೇಶ್ ಅವರ ತಂದೆ) ನಮ್ಮ ಕೈಹಿಡಿದರು ಎಂದು ಜಗ್ಗೇಶ್ ವಿವರ ನೀಡಿದರು.
ಈ ಆಡಿಯೋ ಕಂಪನಿಗಳು ಇನ್ನೇನು ಮಿಕ ಬಲೆಗೆ ಬೀಳುತ್ತದೆ ಎಂದು ಗೊತ್ತಾದ ಕೂಡಲೆ ಆಡಿಯೋ ರೈಟ್ಸ್ ತೆಗೆದುಕೊಳ್ಳಲು ಹಿಂಜರಿಯುವ ನಾಟಕ ಆಡುತ್ತವೆ. ನಿರ್ಮಾಪಕರು ಆಡಿಯೋ ರೈಟ್ಸ್ನಿಂದ ಸಿಕ್ಕಷ್ಟು ಸಿಗಲಿ ಎಂದು ಕಂಪನಿ ಹೇಳುವ ರೇಟಿಗೆ ಮಾರಲಿ ಎಂಬುದು ಆಡಿಯೋ ಕಂಪನಿಗಳ ತಂತ್ರ. ಕಡಿಮೆ ಬೆಲೆಗೆ ಕೊಂಡ ಆಡಿಯೋ ರೈಟ್ಸ್ ಮೂಲಕ ಕಂಪನಿಗಳು ಅಪಾರ ಲಾಭ ಗಳಿಸುತ್ತವೆ. ಎಫ್ ಎಂ ರೇಡಿಯೋಗಳಿಂದ, ರಿಂಗ್ ಟೋನ್ಸ್ ರೂಪದಲ್ಲಿ ಆಡಿಯೋ ಕಂಪನಿಗಳಿಗೆ ದುಡ್ಡು ಹರಿದು ಬರುತ್ತದೆ. ಆದರೆ ನಿರ್ಮಾಪಕನಿಗೆ ಮಾತ್ರ ಉಂಡೆ ನಾಮ ಹಾಕುತ್ತಾರೆ ಎಂದು ಜಗ್ಗೇಶ್ ಹೆಸರು ಹೇಳಲು ಇಚ್ಛಿಸದ ಆಡಿಯೋ ಕಂಪನಿಗಳ ಧೋರಣೆಯನ್ನು ಖಂಡಿಸಿದರು.
ಒಟ್ಟಿನಲ್ಲಿ ಈ ಆಡಿಯೋ ಕಂಪನಿಗಳು ನಿರ್ಮಾಪಕರ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರ ಮಾಡಿಕೊಳ್ಳುತ್ತವೆ. ಆದರೆ ಅನ್ನಹಾಕಿದ ದಣಿಗೆ ಮಾತ್ರ ಕನ್ನ ಹಾಕುವ ಕೆಲಸ ಮಾಡುತ್ತವೆ. ತಾವು ಮುಂಬರುವ ನಿರ್ಮಾಪಕರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾದರೆ ಆಡಿಯೋ ಕಂಪನಿಗಳ ಸೊಕ್ಕು ಮುರಿಯುವುದಾಗಿ ಜಗ್ಗೇಶ್ ಪ್ರತಿಜ್ಞೆ ಮಾಡಿದರು.


Click it and Unblock the Notifications











