ಫಿಲಂ ಚೇಂಬರ್ನಲ್ಲಿ ನಕಲಿ ಸಿಡಿಗಳ ಮಾರಣಹೋಮ
ರೇಸ್ ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬುಧವಾರ(ಜ.12) ಮಟ ಮಟ ಮಧ್ಯಾಹ್ನ ಒಂದು ಅಚ್ಚರಿ ಕಾದಿತ್ತು. ನಕಲಿ ಸಿಡಿ, ಡಿವಿಡಿಗಳನ್ನು ತಂದು ರಾಶಿ ಹಾಕಲಾಗಿತ್ತು. ಫಿಲಂ ಚೇಂಬರ್ ಏನಾದರೂ ಕುಟುಕು ಕಾರ್ಯಾಚರಣೆ ನಡೆಸಿತ್ತೇ ಎಂಬ ಅನುಮಾನದ ನಡುವೆ ಇನ್ನೊಂದು ಅಚ್ಚರಿ ಕಾದಿತ್ತು!
ಕನ್ನಡ ಚಿತ್ರರಂದ ಮಟ್ಟಿಗೆ ಇದೊಂದು ಅದ್ಭುತ ಬೆಳವಣಿಗೆ ಎಂದೇ ಹೇಳಬೇಕು. ನಕಲಿ ಆಡಿಯೋ, ವಿಡಿಯೋ ಸಿಡಿಗಳನ್ನು ತಯಾರಿಸುತ್ತಿದ್ದವರೇ ಗೃಹ ಸಚಿವ ಆರ್ ಅಶೋಕ್ ಬಳಿ ಬಂದು ಶರಣಾಗಿದ್ದಾರೆ. ಇವರೆಲ್ಲಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ರಾಶಿ ರಾಶಿ ನಕಲಿ ಸಿಡಿಗಳನ್ನು ಹಿಂತಿರುಗಿಸಿದರು.
ನಕಲಿ ಸಿಡಿ ಹಾವಳಿಯಿಂದ ಮುಖ್ಯವಾಗಿ ಮೈಸೂರು ಭಾಗದ ನಿರ್ಮಾಪಕರಿಗೆ ಭಾರಿ ಹೊಡೆತ ಬಿದ್ದಿತ್ತು. ಪೈರಸಿ ದಂಧೆಯಲ್ಲಿ ಭಾಗಿಯಾಗಿದ್ದ ಇವರೆಲ್ಲಾ ಸ್ವ್ವಯಂಪ್ರೇರಿತರಾಗಿ ಶರಣಾಗಿರುವುದು ಇಡೀ ಕನ್ನಡ ಚಿತ್ರದ್ಯೋಮವನ್ನು ಮೂಕವಿಸ್ಮಯಗೊಳಿಸಿದೆ. "ತಮ್ಮ ತಪ್ಪು ಈಗ ಅರಿವಾಗಿದೆ. ಇನ್ನು ಮುಂದೆ ಈ ಲುಚ್ಚಾ ಕೆಲಸ ಮಾಡಲ್ಲ" ಎಂದು ಅವರೆಲ್ಲಾ ಅಶೋಕ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡರು.
ಕನ್ನಡ ಹಾಗೂ ವಿವಿಧ ಭಾಷೆಯ ಸರಿಸುಮಾರು 20,000ಕ್ಕೂ ಅಧಿಕ ನಕಲಿ ಡಿವಿಡಿಗಳನ್ನು ಆರ್ ಅಶೋಕ್, ಕೆಎಫ್ ಸಿಸಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮುಂದೆ ನಾಶಪಡಿಸಲಾಯಿತು. ಈ ಬೆಳವಣಿಗೆಯನ್ನು ಸಚಿವರು ಸ್ವಾಗತಿಸಿದರು.
ಪೈರಸಿಯನ್ನು ತಡೆಗಟ್ಟಲು ಗೂಂಡಾ ಕಾಯಿದೆ ಜಾರಿಗೆ ತರಲು ರಾಜ್ಯ ಸರ್ಕಾರವೇನೋ ಮುಂದಡಿಯಿಟ್ಟಿದೆ. ಆದರೆ ಕೇಂದ್ರ ಸರಕಾರದಆದೇಶಕ್ಕಾಗಿ ಕಾಯಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಶೀಘ್ರ ಸ್ಪಂದಿಸುವಂತೆ ವಿನಂತಿಸಿಕೊಳ್ಳುವುದಾಗಿ ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಫೆಬ್ರವರಿ 4ರಿಂದ 6ರವೆಗೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನುಡಿಹಬ್ಬಕ್ಕೆ ಸಿನಿಮಾ ತಾರೆಗಳನ್ನು ಆಹ್ವಾನಿಸಲು ಕೆಎಫ್ಸಿಸಿ ಕಚೇರಿಗೆ ಅಶೋಕ್ ಬಂದಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಉಪಸ್ಥಿತರಿದ್ದರು. [ಪೈರಸಿ]


Click it and Unblock the Notifications











