ಪತ್ರಕರ್ತ ಸದಾಶಿವ ಶೆಣೈಚೊಚ್ಚಲ 'ಪ್ರಾರ್ಥನೆ'
ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಸದಾಶಿವ ಶೆಣೈ ಆಕ್ಷನ್, ಕಟ್ ಹೇಳಲಿದ್ದಾರೆ. ಸೂಪರ್ ಸ್ಟಾರ್ ಗಳ ಬಗ್ಗೆ ಅವರ ಲೇಖನಿಯಿಂದ ಈಗಾಗಲೇ ಹಲವಾರು ಪುಸ್ತಕಗಳು ಹೊರಬಂದಿರುವುದು ಗೊತ್ತಿರುವ ವಿಚಾರವೆ. ಶೆಣೈ ಅವರ ನಿರ್ದೇಶಿರುತ್ತಿರುವ ಚಿತ್ರಕ್ಕೆ 'ಪ್ರಾರ್ಥನೆ' ಎಂದು ಹೆಸರಿಡಲಾಗಿದೆ.
ಬೆಂಗಳೂರಿನ ಸೆಂಚುರಿ ಕ್ಲಬ್ ನಲ್ಲಿ ತಮ್ಮ ಚಿತ್ರ ಬಗ್ಗೆ ಶೆಣೈ ವಿವರ ನೀಡಿದರು. ಪತ್ರಕರ್ತ ಹಾಗೂ ಕಿರುತೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಜೆ ಎಂ ಪ್ರಹ್ಲಾದ್ ಅವರು 'ಪ್ರಾರ್ಥನೆ'ಗೆ ಚಿತ್ರಕತೆ ಬರೆದಿದ್ದಾರೆ. ಐದು ವರ್ಷಗಳ ಹಿಂದೆಯೇ ಈ ಚಿತ್ರದ ಬಗ್ಗೆ ಶೆಣೈ ಅವರ ಬಳಿ ಪ್ರಹ್ಲಾದ್ ಮಾತನಾಡಿದ್ದರಂತೆ.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕೌಟುಂಬಿಕ ಹಿನ್ನೆಲೆಯಲ್ಲಿ 'ಪ್ರಾರ್ಥನೆ' ಕತೆ ಸಾಗುತ್ತದೆ.ಅನಂತನಾಗ್ ಮತ್ತು ಸುಧಾರಾಣಿ ಚಿತ್ರದ ಮುಖ್ಯ ಪಾತ್ರಧಾರಿಗಳು. ತಮ್ಮ ಮಗುವನ್ನು ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕೆ?ಯಾವ ಮಾಧ್ಯಮಕ್ಕೆ ಸೇರಿಸಿದರೆ ಉತ್ತಮ? ಎಂಬ ಪ್ರಚಲಿತ ಸಮಸ್ಯೆಗಳಿಗೆ ಚಿತ್ರದಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ . ಈ ಪಾತ್ರಕ್ಕೆ ಅನಂತನಾಗ್ ಅವರಿಗಿಂತಲೂ ಉತ್ತಮ ನಟ ಮತ್ತೊಬ್ಬರಿಲ್ಲ ಎಂಬುದು ಶೆಣೈ ಅವರ ಅಭಿಪ್ರಾಯ.
ಈ ಪಾತ್ರಕ್ಕಾಗಿ ರಮೇಶ್ ಅರವಿಂದ್ ಅಥವಾ ಸುದೀಪ್ ಅವರನ್ನು ಆಯ್ಕೆ ಮಾಡಿದರೆ ಉತ್ತಮ ಎಂದು ಅನಂತನಾಗ್ ಅವರು ಶೆಣೈ ಅವರಿಗೆ ಸಲಹೆ ನೀಡಿದ್ದರಂತೆ. ಇದೊಂದು ಭಾರಿ ಬಜೆಟ್ ನ ಕಲಾತ್ಮಕ ಚಿತ್ರ ಹಾಗೂ ಕಡಿಮೆ ಬಜೆಟ್ ನ ಕಮರ್ಷಿಯಲ್ ಚಿತ್ರ.ಗ್ರಾಮಾಂತರ ಪ್ರದೇಶದಲ್ಲಿ ಕನ್ನಡ ಭಾಷೆ ಸುರಕ್ಷಿತವಾಗಿದೆ. ಕನ್ನಡ ಭಾಷೆಯ ಉಳಿವಿಗಾಗಿ ನಮ್ಮಲ್ಲಿ ಪರಿಹಾವಿದೆ ಆದರೆ ಯಾರೂ ಅದನ್ನು ಪಾಲಿಸಲು ಸಿದ್ಧರಿಲ್ಲ ಎನ್ನುತ್ತಾರೆ ಶೆಣೈ.
ಭೀಮಸೇನ ಜೋಷಿ ಹಾಗೂ ಅನಂತನಾಗ್ ಅವರ ಅಭಿಮಾನಿ ನಾನು ಎನ್ನುವ ವೀರ್ ಸಮರ್ಥ್, ಚಿತ್ರದಲ್ಲಿನ ಒಂದು ಪ್ರಾರ್ಥನೆ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಾಮಚಂದ್ರ ಐತಾಳ್ ಅವರಿಗೆ 'ಪ್ರಾರ್ಥನೆ'75ನೇ ಚಿತ್ರ. ಸಾಮಾಜಿಕ ಸಮಸ್ಯೆಯೊಂದರ ಸುತ್ತ ಸುತ್ತವ 'ಪ್ರಾರ್ಥನೆ'ಆ ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಹರೀಷ್.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











