ಸ್ವಯಂಕೃಷಿ ಮೂಲಕ ಕನ್ನಡಕ್ಕೆ ಹಿಂತಿರುಗಿದ ಚರಣ್ ರಾಜ್
ಸುದೀರ್ಘ ಸಮಯದ ಬಳಿಕ ಖ್ಯಾತ ನಟ ಚರಣ್ ರಾಜ್ ಕನ್ನಡಕ್ಕೆ ಮರಳಿದ್ದಾರೆ. ಈಗಾಗಲೆ ಸಾಕಷ್ಟು ಪ್ರಚಾರ ಪಡೆದಿರುವ 'ಸ್ವಯಂಕೃಷಿ' ಚಿತ್ರದಲ್ಲಿ ಚರಣ್ ರಾಜ್ ಅವರು ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚರಣ್ ರಾಜ್ ಕನ್ನಡಲ್ಲಿ ಅಭಿನಯಿಸಿದ ಕೊನೆಯ ಚಿತ್ರ 'ತಿರುಪತಿ'.
ಚರಣ್ ರಾಜ್ ತಮ್ಮದೇ ಆದಂತಹ ವಿಶಿಷ್ಟ ಮ್ಯಾನರಿಜಂಗೆ ಹೆಸರಾದವರು. ನಾಯಕ ಪ್ರಧಾನ ಪಾತ್ರಗಳಿಗಿಂತ ಹೆಚ್ಚಾಗಿ ಖಳನಟನಾಗಿ ಗುರುತಿಸಿಕೊಂಡಿದ್ದಾರೆ. ಈಗ 'ಸ್ವಯಂಕೃಷಿ' ಚಿತ್ರದಲ್ಲಿ ಅಂತಹದ್ದೇ ಒಂದು ಗಮನಾರ್ಹ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ತೆಲುಗು, ತಮಿಳಿನಲ್ಲಿ ಸಖತ್ ಬ್ಯುಸಿಯಾಗಿದ್ದ ಚರಣ್ ರಾಜ್ರನ್ನು ಕಡೆಗೂ ಕನ್ನಡಕ್ಕೆ ಕರೆತರುವ ಸಾಹಸ ಮಾಡಿದವರು ಚಿತ್ರದ ನಿರ್ದೇಶಕ ವೀರೇಂದ್ರ ಬಾಬು.
'ಸ್ವಯಂಕೃಷಿ'ಗೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲ ಸಂಗತಿಯಿದೆ. "ಶ್ರೀಮನ್ ನಾರಾಯಣಾ ನಿನ್ನ ಹುಂಡಿ ದಯಪಾಲಿಸೋ ಗೋವಿಂದ" ಎಂಬ ಗೀತೆಯನ್ನು ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಬರೆದಿದ್ದಾರೆ. ಇತ್ತೀಚೆಗೆ ಈ ಗೀತೆಯ ಚಿತ್ರೀಕರಣ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಮುರಳಿ ನೃತ್ಯ ಸಂಯೋಜಿಸಿದ ಈ ಹಾಡಿನ ಚಿತ್ರೀಕರಣದಲ್ಲಿ ವೀರೇಂದ್ರಬಾಬು, ಜನಾರ್ದನ್, ವಿಜಯ್ಚೆಂಡೂರ್ ಹಾಗೂ ರಷ್ಯನ್ ನರ್ತಕಿಯರು ಭಾಗವಹಿಸಿದ್ದರು.
ವೀರೇಂದ್ರಬಾಬು 'ಸ್ವಯಂಕೃಷಿ' ಚಿತ್ರದ ನಾಯಕ ನಟ. ತಮನ, ಜೀವನ್, ವಿಜಯ್ಚೆಂಡೂರ್, ಜನಾರ್ದನ್, ಉಮಾಶ್ರೀ, ರಂಗಾಯಣರಘು, ಕೃಷ್ಣೇಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಟನೆಯ ಜೊತೆಗೆ ಈ ಚಿತ್ರವನ್ನು ವೀರೇಂದ್ರ ಬಾವು ನಿರ್ಮಿಸಿ, ನಿರ್ದೇಶಿಸಿದ್ದಾರೆ.


Click it and Unblock the Notifications











