'ಮದುವೆ ಮನೆ'ಯ ಹೊಸ ಗಂಡು ಗಣೇಶ್
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮದುವೆ ಸಂಭ್ರಮ ಶುರುವಾಗಿದೆ. ಆದರೆ ಈ ಬಾರಿ ಯಾರು ಯಾರನ್ನು ಮದುವೆಯಾಗುತ್ತಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯಲ್ಲಿರುವ ಭಾರಿ ಬಜೆಟ್ ನ 'ಮದುವೆ ಮನೆ'ಚಿತ್ರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಸೆಟ್ಟೇರಿದೆ.
ಯಜಮಾನ ಖ್ಯಾತಿಯ ಎಚ್ ಎ ರಹಮಾನ್ 'ಮದುವೆ ಮನೆ' ಚಿತ್ರದ ನಿರ್ಮಾಪಕ. ಚಿತ್ರದ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಏನಿಲ್ಲಾ ಎಂದರೂ ಹದಿನೈದು ಬಾರಿ ಕತೆ ಹೇಳಿ ಕಡೆಗೂ ಒಪ್ಪಿಸಿದ್ದಾರೆ ರಹಮಾನ್ ಅವರನ್ನು. ಗಣೇಶನಿಗೂ ಅಷ್ಟೇ ಬಾರಿ ಕತೆ ಹೇಳಿ ಕಡೆಗೂ ಆಕ್ಷನ್, ಕಟ್ ಹೇಳುತ್ತಿದ್ದಾರೆ.
ಮದುವೆ ಮನೆ ಮತ್ತೊಂದು 'ಯಜಮಾನ' ಚಿತ್ರವಾಗಲಿದೆ ಎಂಬ ನಿರೀಕ್ಷೆಯಲ್ಲಿ ಎಚ್ ಎ ರಹಮಾನ್ ಇದ್ದಾರೆ. ಗಣೇಶನ ವೃತ್ತಿ ಜೀವನದಲ್ಲೂ ಈ ಚಿತ್ರ ಉತ್ತಮ ತಿರುವು ನೀಡಲಿದೆ ಎಂಬ ನಿರೀಕ್ಷೆಯಿದೆ. ಕತೆ, ಚಿತ್ರಕತೆ ವಿಚಾರಕ್ಕೆ ಬಂದರೆ ಇದೊಂದು ಆಧುನಿಕ ರಾಮಾಯಣ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್.
ಪ್ರೇಕ್ಷಕರ ಊಹೆಗೆ ನಿಲುಕದ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ ಎಂಬ ವಿಶ್ವಾಸವನ್ನು ಸುನಿಲ್ ಕುಮಾರ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಸುನಿಲ್ ಕುಮಾರ್ ಸಿಂಗ್ ಅತ್ಯುತ್ತಮ ಕತೆ, ಚಿತ್ರಕತೆಯನ್ನು ರಚಿಸಿದ್ದಾರೆ. ಈ ರೀತಿಯ ಚಿತ್ರದಲ್ಲಿ ನಾನು ಇದುವರೆಗೂ ಕಾಣಿಸಿಕೊಂಡಿಲ್ಲ. ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ಚಿತ್ರವಾಗಲಿದೆ ಎಂದು ಗಣೇಶ್ ಹೇಳಿದರು.
ಚಿತ್ರದ ನಾಯಕಿ ಶ್ರದ್ಧಾ ಆರ್ಯ ಗೈರು ಎದ್ದು ಕಾಣುತ್ತಿತ್ತು. ಚಿತ್ರಕ್ಕೆ ಕಾಮಿಡಿ ಸಂಭಾಷಣೆ ತಬ್ಲಾ ನಾಣಿ ಲೇಖನದಲ್ಲಿ ಮೂಡಿಬಂದಿದೆ. ಉಪೇಂದ್ರ ಜೊತೆ ಕೆಲಸ ಮಾಡಿದ ಡಾ.ನಾಗೇಶ್ ಮತ್ತು ನರಸಿಂಹ ಚಿತ್ರಕತೆ, ಸಂಭಾಷಣೆಯಲ್ಲಿ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಮಣಿಕಾಂತ್ ಕದ್ರಿ ಅವರ ಸಂಗೀತವಿದೆ. ಚಂದ್ರು ಅವರ ಛಾಯಾಗ್ರಹ ಮದುವೆ ಮನೆಗಿದೆ.


Click it and Unblock the Notifications











