ಧನ್ಯವಾದಗಳು ಚಿತ್ರವನ್ನು ಗೆಲ್ಲಿಸಿದ್ದಕ್ಕೆ... ಯಾಕೆ?
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲೊಂದು ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಅದು ಚಿತ್ರ ಬಿಡುಗಡೆಯಾದ ಮರುದಿನವೇ 'ಧನ್ಯವಾದಗಳು ಚಿತ್ರವನ್ನು ಗೆಲ್ಲಿಸಿದ್ದಕ್ಕೆ...' ಎಂಬ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದು. ಈ ರೀತಿ ಜಾಹೀರಾತು ಪ್ರಕಟಿಸಿದ ನಂತರ ಜನರ ಪ್ರತಿಕ್ರಿಯೆಗಳ ಬಗ್ಗೆ ನಿಗಾ ಇಡುವ ಕೆಲಸವನ್ನು ಚಿತ್ರತಂಡ ಮಾಡಬೇಕಾಗಿದೆ.
ಜನ ಅದರ ಬಗ್ಗೆ ಏನು ಮಾತಾಡಿಕೊಳ್ಳುತ್ತಿದ್ದಾರೆ ಎಂಬ ಅರಿವು ಬಹುಶಃ ಚಿತ್ರತಂಡದವರಿಗೆ ಇರಲಿಕ್ಕಲ್ಲ. ಇಡೀ ಚಿತ್ರತಂಡಕ್ಕೆ ಅದು ಅನಿವಾರ್ಯ ಅಲ್ಲದಿದ್ದರೂ ನಿರ್ಮಾಪಕರಿಗಾದರೂ ಅರಿವಾಗಲೇಬೇಕು. ಜನರು ಈ ರೀತಿಯ ಪ್ರಚಾರವನ್ನು 'ನೆಗೆಟಿವ್' ಆಗಿ ತೆಗೆದುಕೊಳ್ಳಲೂಬಹುದು. ಚಿತ್ರತಂಡಕ್ಕೆ ಸಿನಿಪ್ರೇಕ್ಷಕರ ಅಭಿಪ್ರಾಯ ತೀರಾ ಮಹತ್ವದ್ದು ಎಂಬುದನ್ನು ಮರೆಯಬಾರದು.
ಕಾರಣ, ಸಿನಿಮಾ ಬಿಡುಗಡೆ ಆದಮೇಲೆ ಅದು ಗೆದ್ದಿದೆ ಎಂದು ಹೇಳುವುದಕ್ಕೆ ಕೆಲವು ದಿನಗಳಾದರೂ ಬೇಕು. ಒಂದೇ ದಿನದಲ್ಲಿ, ಮೊದಲ ಶೋ ನೋಡಿ ಚಿತ್ರ ಗೆದ್ದಿದೆ ಎಂದು ಚಿತ್ರತಂಡ ಘೋಷಿಸಿದರೆ ಜನರು ನಂಬಲು ಸಾಧ್ಯವಾಗದಿರಬಹುದು. ಬಿಡುಗಡೆಯ ನಂತರ ಮಾಡುವ ಪ್ರಚಾರ ಸಾಕಷ್ಟು ಮುಖ್ಯವಾದರೂ ಅದು ಹೇಗಿರಬೇಕೆಂಬುದೂ ಅಷ್ಟೇ ಮುಖ್ಯ. ಈ ಬಗ್ಗೆ ಚಿತ್ರತಂಡ, ಮುಖ್ಯವಾಗಿ ನಿರ್ಮಾಪಕರು ಯೋಚಿಸುವುದು ಒಳ್ಳೆಯದು.


Click it and Unblock the Notifications











