ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದರ್ ಬಾಹರ್
"ಎಕ್ಕ ರಾಜ ರಾಣಿ ನಿನ್ನ ಕೈಯೊಲಗೆ ಹಿಡಿ ಮಣ್ಣು ನಿನ್ನ ಬಾಯೊಳಗೆ" ಎಂದು 'ಜಾಕಿ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಣಿದಿದ್ದು ಗೊತ್ತೆ ಇದೆ. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಅಂದರ್ ಬಾಹರ್' ಆಡಲಿದ್ದಾರೆ. ಆದರೆ ನಿಜವಾಗಿಯೂ ಅಲ್ಲ ತೆರೆಯ ಮೇಲೆ.
ಪ್ರಯೋಗಶೀಲ ನಿರ್ದೇಶಕ ಗುರುಪ್ರಸಾದ್ ಅವರ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಯುವ ನಿರ್ದೇಶಕ ಪ್ರಣೀತ್ ಸಿದ್ಧಪಡಿಸಿರುವ ಚಿತ್ರವೇ 'ಅಂದರ್ ಬಾಹರ್'. ಕತೆ ಕೇಳಿದ ಶಿವಣ್ಣ ಫುಲ್ ಇಂಪ್ರೆಸ್ ಆದರಂತೆ. ಚಿತ್ರಕ್ಕೆ ಮೌನ ಸಮ್ಮತಿ ಸೂಚಿಸಿದ್ದಾರೆ.
ಶಿವಣ್ಣ ಅವರ ಕುಟುಂಬಕ್ಕೆ ಆಪ್ತರಾಗಿರುವ ಕೆಲವು ಗೆಳೆಯರು ಜೊತೆ ಕೈಜೋಡಿಸಿ ಜಗದೀಶ್ ಹಾಗೂ ಭಾಸ್ಕರ್ ಎಂಬುವವರು 'ಅಂದರ್ ಬಾಹರ್' ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ. ಚಿತ್ರದ ನಿರ್ಮಾಪದ್ವಯರು ಡಾ.ರಾಜ್ ಅವರಿಗೆ ಆತ್ಮೀಯರೂ ಆಗಿದ್ದರು ಎಂಬುದು ಗಮನಾರ್ಹ ಸಂಗತಿ.
ಬರೀ ಲಾಂಗು ಮಚ್ಚು ಕೊಚ್ಚು ಚಿತ್ರಗಳಿಂದ ರೋಸಿಹೋಗಿರುವ ಶಿವಣ್ಣ ಹೊಸ ಕತೆಯ ನಿರೀಕ್ಷೆಯಲ್ಲಿದ್ದರು. 'ಅಂದರ್ ಬಾಹರ್' ಚಿತ್ರದ ಮೂಲಕ ಶಿವಣ್ಣನಿಗೆ ಆ ರೀತಿಯ ಕತೆ ಸಿಕ್ಕಂತಾಗಿದೆ. ಶಿವಣ್ಣ ಜೊತೆ ಪಾರ್ವತಿ ಮೆನನ್ ಅಂದರ್ ಬಾಹರ್ ಆಡಲಿದ್ದಾರೆ. ಉಳಿದ ಪಾತ್ರವರ್ಗಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಬಹುಶಃ ಇದು ಶಿವಣ್ಣ ಅವರ 103 ಅಥವಾ 104ನೇ ಚಿತ್ರವಾಗಬಹುದು. ಚಿತ್ರಕ್ಕೆ 'ಜೈಹೋ' ಖ್ಯಾತಿಯ ವಿಜಯ ಪ್ರಕಾಶ್ ಹಾಡುವ ಸಾಧ್ಯತೆಗಳಿವೆ. (ಏಜೆನ್ಸೀಸ್)


Click it and Unblock the Notifications











