‘ಧೂಳ್‘ ಚಿತ್ರಕ್ಕೆ ಪ್ರಥಮ ಹಂತದ ಚಿತ್ರೀಕರಣ ಪೂರ್ಣ
ಹುಡುಗನಿಗೆ ಹದಿಹರೆಯ. ಹುಡುಗಿಗೂ ಅದೇ ವಯಸ್ಸು. ಕಾಲೇಜಿನಲ್ಲಿ ಇವರಿಬ್ಬರ ಮೊದಲ ಭೇಟಿ. ಪ್ರಥಮ ನೋಟದಲ್ಲೇ ಹುಡುಗಿಗೆ ಪ್ರೀತಿಯ ಬಗ್ಗೆ ತಿಳಿಸುವ ಧೈರ್ಯವಂತ ಆ ಹುಡುಗ. ಅವನ ಆ ಮಾತಿಗೆ ಅದು ಹೇಗೆ ಪ್ರೀತಿಸುತ್ತಿಯೋ ನೋಡೋಣ? ಎಂದು ಸವಾಲ್ ಹಾಕುವ ಹುಡುಗಿ.
ಈ ಮೇಲಿನ ಸನ್ನಿವೇಶವನ್ನು ಶ್ರೀಸೇವಾಲಾಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಎಚ್.ಸುನೀಲ್ ನಿರ್ಮಿಸುತ್ತಿರುವ 'ಧೂಳ್' ಚಿತ್ರಕ್ಕಾಗಿ ನಿರ್ದೆಶಕ ಧರಣಿ ಬಿ.ಜಿ.ಎಸ್ ಕಾಲೇಜಿನಲ್ಲಿ ಚಿತ್ರೀಕರಿಸಿಕೊಂಡರು. ಯೋಗೀಶ್ ಹಾಗೂ ಅಂದ್ರಿತಾ ರೇ ಅಭಿನಯದಲ್ಲಿ ಮೂಡಿ ಬಂದ ಈ ಸನ್ನಿವೇಶದ ಚಿತ್ರೀಕರಣದೊಂದಿಗೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ನುಡಿದಿದ್ದಾರೆ.
ಖ್ಯಾತ ನಿರ್ದೇಶಕ ಎಮ್.ಎಸ್.ರಾಜಶೇಖರ್ ಅವರ ಪುತ್ರ ಧರಣಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಘವೇಂದ್ರ ಎಂಬ ಹೆಸರಿನಿಂದ ಪರಿಚಿತರಾಗಿದ್ದ ಇವರು ಈ ಚಿತ್ರದಿಂದ ಧರಣಿ ಎಂದು ನಾಮ ಬದಲಾವಣೆ ಮಾಡಿಕೊಂಡಿದ್ದಾರೆ.
ವಿ.ಹರಿಕೃಷ್ಣ ಸಂಗೀತ, ಕೆ.ದತ್ತು ಛಾಯಾಗ್ರಹಣ, ಕೆ.ರಾಮ್ನಾರಾಯಣ್ ಸಂಭಾಷಣೆ, ಮೋಹನ್ ಪಂಡಿತ್ ಕಲೆ ಹಾಗೂ ರವಿವರ್ಮ ಅವರ ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಅಂದ್ರಿತಾ ರೇ, ಪ್ರಕಾಶ್ ರೈ, ಓಂಪ್ರಕಾಶ್ರಾವ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











