ಬೆಳ್ಳಿತೆರೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ! ಆದರೆ ಈ ಬಾರಿ ಅವರು ಗ್ರಾಮ ವಾಸ್ತವ್ಯ ಮಾಡಲಿರುವುದು ತೆರೆಯ ಮೇಲೆ. ಹೌದು ಎಚ್ಡಿಕೆ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ, ಚಿತ್ರದ ಹೆಸರು 'ಶಿವಕಾಶಿ'.
'ಶಿವಕಾಶಿ' ಚಿತ್ರದ ನಿರ್ದೇಶಕ ಬಿ ರಾಮಪ್ರಕಾಶ್ ಮಾತನಾಡುತ್ತಾ, ತಮ್ಮ ಚಿತ್ರದಲ್ಲಿ ಗ್ರಾಮ ವಾಸ್ತವ್ಯ ಪಾತ್ರವನ್ನು ಪೋಷಿಸಲು ಕುಮಾರಸ್ವಾಮಿ ಒಪ್ಪಿರುವುದಾಗಿ ತಿಳಿಸಿದ್ದಾರೆ. ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಎಚ್ಡಿಕೆ ಕಾಣಿಸಲಿದ್ದು ಅವರು ಹಳ್ಳಿಹಳ್ಳಿಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳಿಗಳನ್ನು ಆಲಿಸಲಿದ್ದಾರೆ ಎಂದು ರಾಮ ಪ್ರಕಾಶ್ ವಿವರ ನೀಡಿದ್ದಾರೆ.
ಚಿತ್ರದಲ್ಲಿ ಹಳ್ಳಿ ಜನರ ಸಂಕಷ್ಟಗಳನ್ನು ಎಚ್ಡಿಕೆ ಬಗೆಹರಿಸುತ್ತಾರೆ. ಮುಗ್ಧ ಹಳ್ಳಿ ಜನರ ಪ್ರೀತಿಗೆ ಪಾತ್ರವಾಗುವ ಮುಖ್ಯಮಂತ್ರಿಗಳನ್ನು ಅವರು ಮನಸಾರೆ ಅಭಿನಂದಿಸುತ್ತಾರೆ. ಈ ಪಾತ್ರಕ್ಕೆ ಕುಮಾರಸ್ವಾಮಿ ಅವರೇ ಅರ್ಹವಾದರು ಅನ್ನಿಸಿದ ಕಾರಣನ್ನು ಅವನ್ನು ಭೇಟಿಯಾಗಿ ಚಿತ್ರದ ಕತೆಯನ್ನು ಹೇಳಿದೆವು. ಅವರು ಪಾತ್ರವನ್ನು ಮಾಡುವುದಾಗಿ ಒಪ್ಪಿಕೊಂಡರು ಎಂದು ಪ್ರಕಾಶ್ ತಿಳಿಸಿದ್ದಾರೆ.
ಗ್ರಾಮ ವಾಸ್ತವ್ಯದಂತಹ ಅದ್ಭುತ ಕಲ್ಪನೆ ಕೊಟ್ಟಿದ್ದೆ ಅವರು. ಅವರೇ ಈ ಪಾತ್ರಕ್ಕೆ ಅರ್ಹವಾದ ವ್ಯಕ್ತಿ ಅನ್ನಿಸಿ ಅವರನ್ನು ಸಂಪರ್ಕಿಸಿದ್ದಾಗಿ ಪ್ರಕಾಶ್ ತಿಳಿಸಿದ್ದಾರೆ. ಶಿವಕಾಶಿ ಚಿತ್ರದ ಹಾಡೊಂದರಲ್ಲೂ ಎಚ್ಡಿಕೆ ಕಾಣಿಸಲಿದ್ದಾರೆ. ಈಗಾಗಲೆ ಕುಮಾರಸ್ವಾಮಿ ಅವರು ''ಈ ಮಣ್ಣಿನ ಮೇಲೆ ಕೈಯಿಟ್ಟು ನುಡಿಯುತ್ತೇನೆ ಒಂದು ಮಾತು ಸತ್ಯ...'' ಎಂಬ ಹಾಡನ್ನು ಕೇಳಿದ್ದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರಂತೆ.
ಏಪ್ರಿಲ್ 25ರಿಂದ ಮೈಸೂರಿನಲ್ಲಿ ಕುಮಾರಸ್ವಾಮಿ ಅವರ ಪಾತ್ರದ ಚಿತ್ರೀಕರಣ ನಡೆಯಲಿದೆ. ಹಾಡಿನಲ್ಲಿ 'ಮಣ್ಣು' ಎಂಬ ಪದ ಬಂದಿರುವುದರಿಂದ ಎಚ್ಡಿಕೆ ಸಹಜವಾಗಿ ಖುಷಿಯಾಗಿದ್ದಾರಂತೆ. 'ಮಣ್ಣಿನ ಮಗ' ದೇವೇಗೌಡರನ್ನು 'ಮಣ್ಣು' ಎಂಬ ಪದ ಸಾಂಕೇತಿಕವಾಗಿ ಸೂಚಿಸುತ್ತದೆ ಎಂಬ ಕಾರಣಕ್ಕೆ ಈ ಆನಂದವಂತೆ. ಆದರೆ ಹಾಡಿನಲ್ಲಿ 'ಕೈ'(ಕಾಂಗ್ರೆಸ್) ಎಂಬ ಪದಬಂದಿರುವುದು ಕಾಕತಾಳೀಯ ಅಷ್ಟೆ ಎನ್ನುತ್ತಾರೆ ಪ್ರಕಾಶ್.
ಹಾಡಿಗೆ ಗಂಧರ್ವ ಅವರ ಸಾಹಿತ್ಯವಿದ್ದು ಸಂಗೀತವನ್ನು ಅವರೇ ಸಂಯೋಜಿಸಿದ್ದಾರೆ. ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತಹ ಪ್ರಚಲಿತ ಸಮಸ್ಯೆಯೇ ಚಿತ್ರದ ಕಥಾವಸ್ತು. ಶತಮಾನಗಳಿಂದ ಬಗೆಹರಿಸಲಾಗದ ಕಾವೇರಿ ಜಲವಿವಾದವನ್ನು ಎಚ್ಡಿಕೆ ಈ ಚಿತ್ರದಲ್ಲಿ ಚಿಟಿಕೆ ಹೊಡೆದಷ್ಟು ಸುಲಭವಾಗಿ ಪರಿಹರಿಸುತ್ತಾರೆ. ಬೆಳ್ಳಿತೆರೆಯ ಅನುಪಮ ಜೋಡಿ ಅನಂತನಾಗ್ ಮತ್ತು ಲಕ್ಷ್ಮಿ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.


Click it and Unblock the Notifications











