ಅಜ್ಞಾತವಾಸ ಮುಗಿಸಿದ ಡಿ.ರಾಜೇಂದ್ರಬಾಬು

'ಬಿಂದಾಸ್" ಚಿತ್ರದ ಮುಹೂರ್ತದಲ್ಲಿ ಡಿ.ರಾ.ಬಾಬು ನಾಯಕಿ ಹನ್ಸಿಕಾ ಮೋಟ್ವಾನಿ ಅವರನ್ನೂ ಮೀರಿಸುವ ಉತ್ಸಾಹದಿಂದ ಓಡಾಡುತ್ತಿದ್ದರು. 'ಬಿ ಹ್ಯಾಪಿ ನೋ ಬಿಪಿ" ಎನ್ನುವ ಸಿನಿಮಾದ ಅಡಿಬರಹವನ್ನು ಪದೇಪದೇ ಉದ್ಘರಿಸುತ್ತಿದ್ದ ಬಾಬು ಮುಖದಲ್ಲಿ ಹರೆಯದ ಹುಮ್ಮಸ್ಸಿತ್ತು. 'ಬೊಂಬಾಟ್" ಚಿತ್ರದ ಸೆಟ್ನಲ್ಲೂ ಇಂತಹದ್ದೇ ಉತ್ಸಾಹಿ ಬಾಬುವನ್ನು ಕಂಡವರಿದ್ದಾರೆ. ಆದರೆ, ಆ ಎರಡು ಚಿತ್ರಗಳೂ ಸೋತವು. ಸಿನಿಮಾ ಸೋತಾಗ ನಿರ್ದೇಶಕನ ಸ್ಥಾನ ಯಾವುದೆಂದು ಗೊತ್ತಲ್ಲ!
ಅಂದಹಾಗೆ, ಆ ಎರಡು ಸಿನಿಮಾಗಳ ಸೋಲಿಗೆ ಕಾರಣವೇನು? ಬಾಬು ಅವರಿಗೆ ಹೊಸ ಪೀಳಿಗೆಯ ಸಿನಿಮಾ ಮಾಡುವುದು ಸಾಧ್ಯವಾಗಲಿಲ್ಲವಾ? 'ವಿಷಯ ಅದಲ್ಲ" ಅಂತಾರೆ ಬಾಬು.'ನನಗೆ ಸ್ವಾತಂತ್ರ್ಯವೇ ಇರಲಿಲ್ಲ. ವಿಪರೀತ ಒತ್ತಡದಲ್ಲಿ ಬಿಂದಾಸ್ ಹಾಗೂ ಬೊಂಬಾಟ್ ಚಿತ್ರಗಳನ್ನು ಮಾಡಿದೆ. ಅವುಗಳಲ್ಲಿ ನನ್ನತನ ಎನ್ನೋದು ಏನೂ ಇರಲಿಲ್ಲ. ಹೌದು, ಒಂದರ್ಥದಲ್ಲಿ ಪ್ರೇಕ್ಷಕರಿಗೆ ನಾನು ಮಾಡಿದ ದ್ರೋಹವದು. ಏನು ಮಾಡೋದು? ರಾಜಿ ಅನಿವಾರ್ಯವಾಗಿತ್ತು! ಸಿನಿಮಾ ಒಪ್ಪಿಕೊಂಡ ಮೇಲೆ ಮುಗಿಸಿಕೊಡಲೇಬೇಕಲ್ಲ. ಆದರೆ, ಆ ಚಿತ್ರಗಳಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ ಎನ್ನುವುದಂತೂ ಸತ್ಯ" ಎಂದು ಬಾಬು ಹೇಳಿದ್ದಾರೆ.
ಬಾಬು ಈಗ ಸೋಲುಗಳನ್ನು ಮರೆತಿದ್ದಾರೆ. ಅಜ್ಞಾತವಾಸದಲ್ಲಿ ಮನೆಯಲ್ಲಿ ಕೂತು ಕಥೆ ಬರೆದಿದ್ದಾರೆ. ಶಿವರಾಜ್ಕುಮಾರ್ ಅವರನ್ನು ಗಮನದಲ್ಲಿಟ್ಟುಕೊಂಡು ಒಂದು ಕಥೆ ರೂಪಿಸಿದ್ದಾರಂತೆ. ಮಾತುಕತೆ ಚಾಲ್ತಿಯಲ್ಲಿದೆ. ಲೆಕ್ಕಾಚಾರ ಸರಿಯಾದರೆ ಜೂನ್ ಕೊನೆಯ ವೇಳೆಗೆ ಶಿವಣ್ಣನೊಂದಿಗಿನ ಚಿತ್ರ ಸೆಟ್ಟೇರಬಹುದು ಎನ್ನುತ್ತಾರೆ ಬಾಬು. ಹಾಂ, ಹೊಸ ನಿರ್ಮಾಪಕರಿಗಾಗಿ ಅವರು ಮತ್ತೊಂದು ಕಥೆಯನ್ನು ರೆಡಿ ಮಾಡಿದ್ದಾರಂತೆ. ಸದ್ಯದಲ್ಲೇ ಚಿತ್ರ ಸೆಟ್ಟೇರುವುದಂತೂ ಖಚಿತ.
ಬೊಂಬಾಟ್ ಚಿತ್ರ ಧ್ವನಿ ಸುರಳಿ ವಿಮರ್ಶೆ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್
ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್


Click it and Unblock the Notifications











