ಅಣ್ಣಾ ಬಾಂಡ್ ಪುನೀತ್ಗೆ ಹುಟ್ಟುಹಬ್ಬ ಶುಭಾಶಯಗಳು
ಇಂದು ಶನಿವಾರ (ಮಾ.17) ಪವರ್ ಸ್ಟಾರ್, ಅಣ್ಣಾ ಬಾಂಡ್, ಕನ್ನಡದ ಕೋಟ್ಯಾಧಿಪತಿ ಪುನೀತ್ ರಾಜ್ ಕುಮಾರ್ ಅವರ ಜನುಮ ದಿನ. ಆದರೆ ಅವರು ಇಂದು ಅಭಿಮಾನಿಗಳಿಗೆ ಕಾಣದಂತೆ ಮಾಯವಾಗಿದ್ದಾರೆ. ಪುನೀತ್ ಎಲ್ಲಿ ಹೋದರು ಎಂದು ಹುಡುಕಿದರೆ ಅವರು ದೂರದ ಸ್ಪೇನ್ನಲ್ಲಿ ಪತ್ತೆಯಾಗಿದ್ದಾರೆ. 'ಅಣ್ಣಾ ಬಾಂಡ್' ಹಾಡಿನ ಚಿತ್ರೀಕರಣ ಸಲುವಾಗಿ ಅವರು ಸ್ಪೇನ್ಗೆ ಹಾರಿದ್ದಾರೆ.
ಆದ ಕಾರಣ ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆ ಸೆಲಿಬ್ರೇಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾ.15ರಂದೇ ಸುವರ್ಣ ವಾಹಿನಿಯ ಗೇಮ್ ಶೋ 'ಕನ್ನಡದ ಕೋಟ್ಯಾಧಿಪತಿ' ಸೆಟ್ನಲ್ಲಿ ಅವರು ತಮ್ಮ 37ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
ಮಾರ್ಚ್ 20ಕ್ಕೆ ಸ್ಪೇನ್ನಿಂದ ಪುನೀತ್ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. 'ಬೆಟ್ಟದ ಹೂವು' ಚಿತ್ರದಲ್ಲಿ ಬಾಲನಟನಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪುನೀತ್, 'ಚಲಿಸುವ ಮೋಡಗಳು' ಚಿತ್ರದಲ್ಲಿ "ಕಾಣದಂತೆ ಮಾಯವಾದನು..." ಎಂದು ಹಾಡಿ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಂತರ ಸೋಲು ಅನ್ನೋದನ್ನು ಕಾಣದ ಪುನೀತ್ ಇದುವರೆಗೆ 17 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಅವರ 18ನೇ ಚಿತ್ರ ಅಣ್ಣಾಬಾಂಡ್ ಚಿತ್ರೀಕರಣದ ಹಂತದಲ್ಲಿದೆ.
ಪುನೀತ್ ಕನ್ನಡ ಚಿತ್ರರಂಗದಲ್ಲಿ ಹೀಗೇ ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ನೋಡುವ, ಸದಭಿರುಚಿಯ ಚಿತ್ರಗಳನ್ನು ನೀಡಲಿ ಎಂದು ಒನ್ಇಂಡಿಯಾ ಕನ್ನಡ ಹಾರೈಸುತ್ತದೆ. ನಿಮ್ಮ ನೆಚ್ಚಿನ ನಟ ಪುನೀತ್ಗೆ ಶುಭಾಶಯ ತಿಳಿಸಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











