ಇದು ಗಿರೀಶ್ ಕಾರ್ನಾಡ್ ಮತ್ತು ಶ್ರುತಿ ಶಬ್ದಮಣಿ
ಕನ್ನಡದಲ್ಲಿ ಲಾಂಗು, ಮಚ್ಚಿನ ಚಿತ್ರಗಳ ಅಬ್ಬರದ ನಡುವೆ ಕಲಾತ್ಮಕ ಚಿತ್ರಗಳು ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇಂತಹ ಸಂದಿಗ್ಧ ಸಮಯದಲ್ಲಿ ರೇಣು ಡಿಜಿಟಲ್ ಸ್ಟುಡಿಯೋದ ಮಾಲೀಕ ರೇಣುಕುಮಾರ್ ಭಿನ್ನ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಶಬ್ದಮಣಿ'.
ಇದೊಂದು ದೇಶಭಕ್ತಿ ಚಿತ್ರವಾಗಿದ್ದು, ಯುವಕರು ಭಾರತೀಯ ಸೇನೆಗೆ ಸೇರುವಂತೆ ಹುರಿದುಂಬಿಸುವ ಕತೆಯನ್ನು ಒಳಗೊಂಡಿದೆ. ಹಾಗಾಗಿ ಈ ಚಿತ್ರವನ್ನು ದೇಶದ ರಕ್ಷಣೆಗೆ ತಮ್ಮ ಜೀವವನ್ನು ಮುಡಿಪಾಗಿಟ್ಟ ಯೋಧರಿಗೆ ಅರ್ಪಿಸಿದ್ದಾರೆ. ಗಿರೀಶ್ ಕಾರ್ನಾಡ್, ಶ್ರುತಿ, ಹರ್ಷ, ಸುಷ್ಮಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
ಚಿತ್ರದ ಬಗ್ಗೆ ನಟಿ ಶ್ರುತಿ ಮಾತಾನಾಡುತ್ತಾ, ಈ ಪಾತ್ರವನ್ನು ಒಪ್ಪಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿದೆ. ಏಕೆಂದರೆ ಚಿತ್ರದಲ್ಲಿ ತಮ್ಮದು ಅಜ್ಜಿ ಪಾತ್ರ. ಆದರೂ ಪಾತ್ರದಲ್ಲಿ ಸತ್ವವಿರುವ ಕಾರಣ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ. 'ಹೆತ್ತಕರುಳು' ಚಿತ್ರದಲ್ಲಿ ತಾನು ಮೂರು ಮಕ್ಕಳ ತಾಯಿಯಾಗಿ ಅಭಿನಯಿಸಿದ್ದೆ. 'ವೀರಪ್ಪ ನಾಯಕ' ಚಿತ್ರದಲ್ಲಿ ತಾಯಿಯಾಗಿ ಕಾಣಿಸಿಕೊಂಡಿದ್ದೆ. ಈ ಚಿತ್ರ ನಿಜಕ್ಕೂ ಸಂತಸ ಕೊಟ್ಟಿದೆ ಎಂದಿದ್ದಾರೆ.
ಎಂಟು ದಿನಗಳ ಕಾಲ 'ಶಬ್ದಮಣಿ' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಗಿರೀಶ್ ಕಾರ್ನಾಡ್ ಅವರು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ ಶ್ರೀನಿವಾಸ್ ಅವರ ಛಾಯಾಗ್ರಹಣ, ಶಾಮ್ ಶಿವಮೊಗ್ಗ ಅವರ ಸಂಭಾಷಣೆ ಚಿತ್ರಕ್ಕಿದೆ. ಫೈವ್ ಸ್ಟಾರ್ ಗಣೇಶ್ ಅವರ ನೃತ್ಯ ಸಂಯೋಜನೆ, ರಾಮ್ ನಾರಾಯಣ್ ಮತ್ತು ರೇಣು ಕುಮಾರ್ ಅವರ ಸಾಹಿತ್ಯ ಚಿತ್ರಕ್ಕೆ ಕೆ ಡಿ ರವಿ ಅವರ ಸಂಕಲನವಿದೆ. [ಶ್ರುತಿ]


Click it and Unblock the Notifications











