ಪುನೀತ್, ಶಿವಣ್ಣನ ಜತೆ ನಟಿಸಲು ನಿಧಿ ಒಲವು!
ಅಪ್ಪಟ ಕನ್ನಡ ನಟಿ ನಿಧಿ ಸುಬ್ಬಯ್ಯ ನಟನೆಯ 'ಚಂಕಾಯ್ಸಿ ಚಿಂದಿ ಉಡಾಯ್ಸಿ' ಅರ್ಧ ಶತಕ ಬಾರಿಸಿದೆ. ಆಕೆ ನಟಿಸಿದ್ದ ಚೊಚ್ಚಲ ಚಿತ್ರ 'ಅಭಿಮಾನಿ' ಹೇಳಿಕೊಳ್ಳುವಂತಹ ಹೆಸರು ತರಲಿಲ್ಲ. ಇದೀಗ ಆಕೆ ಅಭಿನಯದ ಮೂರನೇ ಚಿತ್ರ 'ಕೃಷ್ಣ ನೀ ಲೇಟಾಗಿ ಬಾರೋ' ಬಿಡುಗಡೆಗೆ ಸಿದ್ಧವಾಗಿದೆ.
ರಮೇಶ್ ಅರವಿಂದ್, ಮೋಹನ್, ನೀತೂ ಮತ್ತು ನಾನು ಈ ಚಿತ್ರದಲ್ಲಿ ನಟಿಸಿದ್ದೇವೆ. ಇದೊಂದು ಪಕ್ಕಾ ಹಾಸ್ಯ ಚಿತ್ರ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ನಾನು ಸಂಪ್ರದಾಯಸ್ತ ಹುಡುಗಿಯಾಗಿ ಕಾಣಿಸಲಿದ್ದೇನೆ. ಚಂಕಾಯ್ಸಿ ಚಿತ್ರದಲ್ಲಿನ ಆಧುನಿಕ ಹುಡುಗಿಯ ಪಾತ್ರಕ್ಕೆ ಭಿನ್ನವಾದ ಪಾತ್ರವಿದು ಎನ್ನ್ನುತ್ತಾರೆ ನಿಧಿ.
ರಮೇಶ್ ಅವರ ಚಿತ್ರಗಳನ್ನು ನೋಡುತ್ತಲೇ ಬೆಳೆದವರು ನಾವು. ಇದೀಗ ಅವರೊಂದಿಗೆ ನಟಿಸುವ ಮೂಲಕ ಕನಸು ನನಸಾಗಿದೆ. ವರನಟ ರಾಜ್ ಕುಮಾರ್ ಮತ್ತು ಕಲ್ಪನಾ ನಟನೆಯ 'ಎರಡು ಕನಸು' ಚಿತ್ರದ ಒಂದು ಸನ್ನಿವೇಶವನ್ನು ಕೃಷ್ಣ ನೀ ಲೇಟಾಗಿ...ಚಿತ್ರಕ್ಕ್ಕೂ ಅಳವಡಿಸಿಕೊಂಡಿದ್ದೇವೆ. ರಮೇಶ್ ಮತ್ತು ನಾನು ಈ ಸನ್ನಿವೇಶದಲ್ಲಿ ಅದ್ಭುತವಾಗಿ ನಟಿಸಿದ್ದೇವೆ ಎಂದು ನಿಧಿ ವಿವರ ನೀಡಿದರು.
ಈಗಾಗಲೇ ಮುಂಬೈನಿಂದ ತಮಗೆ ಕರೆಗಳು ಬರುತ್ತಿವೆ. ಆಡಿಷನ್ ಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಆದರೆ ನನಗೆ ಕನ್ನಡ ಚಿತ್ರರಂಗದಲ್ಲೆ ನೆಲೆನಿಂತುಕೊಳ್ಳಬೇಕು ಎಂಬ ಆಸೆ ಇದೆ. ಪುನೀತ್, ಶಿವಣ್ಣ ಮತ್ತು ವಿಜಯ್ ಜತೆ ನಟಿಸಬೇಕು ಎಂಬ ಆಸೆ ಇದೆ.
ಹೊಸ ನಟರಾದ ಯಶ್, ಚಿರಂಜೀವಿ ಸರ್ಜಾ ಮತ್ತು ಕಿರಣ್ ಅವರೊಂದಿಗೂ ನಟಿಸಬೇಕು ಎಂದುಕೊಂಡಿದ್ದೇನೆ ಎನ್ನುವ ನಿಧಿ, ಇನ್ನು ಮುಂದೆ ಕತೆಗಳ ಆಯ್ಕೆಯಲ್ಲಿ ಜಾಗ್ರತೆ ವಹಿಸುತ್ತಾರಂತೆ. ಹಾಗೆಯೇ ಗ್ಲಾಮರಸ್ ಪಾತ್ರಗಳಲ್ಲಿ ಅಭಿನಯಿಸುವುದಿಲ್ಲ ಎನ್ನುತ್ತಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











