ಅಂಜದ ಗಂಡಾಗಿ ಮತ್ತೆ ಬರಲಿದ್ದಾರೆ ಕ್ರೇಜಿಸ್ಟಾರ್
ಎಂಬತ್ತರ ದಶಕದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟಿಸಿದ್ದ ಕ್ರೇಜು ಅಷ್ಟಿಷ್ಟಲ್ಲ. ಖುಷ್ಬು, ರವಿಚಂದ್ರನ್ ಜೋಡಿಯ 'ಅಂಜದ ಗಂಡು' ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತ್ತು. ಹಂಸಲೇಖ ಅವರ ಸಾಹಿತ್ಯ, ಸಂಗೀತದ ಜುಗಲಬಂದಿಯಲ್ಲಿ 'ಅಂಜದ ಗಂಡು' ಹಾಡುಗಳು ಭರ್ಜರಿ ಹಿಟ್ ದಾಖಲಿಸಿದ್ದವು.
ರೇಣುಕಾ ಶರ್ಮ ಆಕ್ಷನ್, ಕಟ್ ಹೇಳಿದ್ದ ಈ ಚಿತ್ರವನ್ನು ಬಿ ಎನ್ ಗಂಗಾಧರ್ ನಿರ್ಮಿಸಿದ್ದರು. 'ಅಂಜದ ಗಂಡು' ಯಶಸ್ಸು ಹಂಸಲೇಖ ಮತ್ತು ರವಿ ಜೋಡಿ 25 ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವಂತೆ ಮಾಡಿತ್ತು. ಅಂತಹ ಯಶಸ್ವಿ ಚಿತ್ರವನ್ನು ಇದೀಗ ಮತ್ತೊಮ್ಮೆ ತೆರೆಗೆ ತರುವ ಪ್ರಯತ್ನಕ್ಕೆ ಅಡಿಗಲ್ಲು ಬಿದ್ದಿದೆ.
ಹಳೆಯ ಚಿತ್ರಗಳ ಜಾಡಿನ್ನು ಹಿಡಿದು ಈಗಾಗಲೆ 'ರಾಣಿ ಮಹಾರಾಣಿ' ಹಾಗೂ 'ಅಂತ' ಚಿತ್ರಗಳು ಬಂದಿವೆ. ಇದೀಗ ಈ ಪಟ್ಟಿಗೆ 'ಅಂಜದ ಗಂಡು' ಸಹ ಸೇರ್ಪಡೆಯಾಗುತ್ತಿದೆ. ಬಿ ಎನ್ ಗಂಗಾಧರ್ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ. ಅವರು ಮತ್ತೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇಂದಿನ ಕಾಲಮಾನಕ್ಕೆ ತಕ್ಕಂತೆ ಕೊಂಚ ಬದಲಾವಣೆಗಳೊಂದಿಗೆ 'ಅಂಜದ ಗಂಡು' ಹೊಸ ಗೆಟಪ್ ನಲ್ಲಿ ಬರಲಿದ್ದಾನೆ. ಚಿತ್ರಕ್ಕೆ ಸಂಬಂಧಿಸಿದ ಉಳಿದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಹಂಸಲೇಖ ಅವರೇ ಸಂಗೀತ ಸಂಯೋಜಿಸುತ್ತಾರಾ ಇಲ್ಲವೆ ಎಂಬುದು ಕಾಲವೇ ನಿರ್ಧರಿಸಲಿದೆ.
ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ, ಏಕೆ ಹೀಗಾಯ್ತೋ, ರಂಭಾ ಬೇಡ ಜಂಬ ಜಂಬ ಗಿಂಬ ಬೇಡ ರಂಭಾ, ಆಕಾರದಲ್ಲಿ ಗುಲಾಬಿ ರಂಗಿದೆ ಎಂಬ ಹಾಡುಗಳು ಜನಪ್ರಿಯವಾಗಿದ್ದವು. ತೂಗುದೀಪ ಶ್ರೀನಿವಾಸ್, ಮಾ.ಮಂಜುನಾಥ್, ಇಂದಿರಾ, ಶ್ರೀನಿವಾಸ ಮೂರ್ತಿ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಅಶೋಕ್ ಬಾದರದಿನ್ನಿ ಅವರ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಚಿತ್ರ.


Click it and Unblock the Notifications











