ಬಿಗಿ ಭದ್ರತೆಯಲ್ಲಿ ಸುಧಾಮೂರ್ತಿ 'ಪ್ರಾರ್ಥನೆ'
ಪತ್ರಕರ್ತ ಸದಾಶಿವ ಶೆಣೈ ನಿರ್ದೇಶಿಸುತ್ತಿರುವ 'ಪ್ರಾರ್ಥನೆ' ಚಿತ್ರದ ಚಿತ್ರೀಕರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಪಾಲ್ಗೊಂಡಿದ್ದರು. ಬಿಗಿ ಭದ್ರತೆಯಲ್ಲಿ ಚಿತ್ರೀಕರಣ ಕಬ್ಬನ್ ಉದ್ಯಾನವನದ ಕೆಜಿಎಲ್ ಕ್ಲಬ್ ನಲ್ಲಿ ನಡೆಯಿತು. ಭದ್ರತಾ ಕಾರಣಗಳಿಗಾಗಿ ಮಾಧ್ಯಮದವರನ್ನು ಚಿತ್ರೀಕರಣಕ್ಕೆ ಆಹ್ವಾನಿಸಿರಲಿಲ್ಲ. ಸುಧಾಮೂರ್ತಿ ಅವರು ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ.
ಗಂಟೆ 11 ಹೊಡೆಯುತ್ತಿದ್ದಂತೆ ಕರಾರುವಾಕ್ಕಾದ ಸಮಯಕ್ಕೆ ಸುಧಾಮೂರ್ತಿ ಚಿತ್ರೀಕರಣಕ್ಕೆ ಆಗಮಿಸಿದರು.ಒಂಚೂರು ಮೇಕಪ್ ನೊಂದಿಗೆ ಸಂಜೆ 4ರ ತನಕ ಅವರು ಚಿತ್ರೀಕರಣದಲ್ಲಿ ಭಾಗಿಯಾದರು. ಮೈತುಂಬ ಹಸಿರು ಸೀರೆ, ಮುಡಿಗೆ ಮಲ್ಲಿಗೆ ಹೂವು, ಕಾಸಗಲ ಕುಂಕುಮದಿಂದ ಸುಧಾಮೂರ್ತಿ ಕಂಗೊಳಿಸುತ್ತಿದ್ದರು. ತೆರೆಯ ಮೇಲೆ ಸುಧಾಮೂರ್ತಿ 22 ನಿಮಿಷಗಳ ಕಾಲ ಕಾಣಿಸಲಿದ್ದಾರೆ ಎಂದು ಸದಾಶಿವ ಶೆಣೈ ವಿವರ ನೀಡಿದರು.
ಭದ್ರತಾ ಕಾರಣಗಳಿಂದ ಮಾಧ್ಯಮದವರನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ ಎಂದು ಸದಾಶಿವ ಶೆಣೈ ತಿಳಿಸಿದರು. ಕರ್ನಾಟಕದ ಧ್ವನಿಯಾಗಿ ಸುಧಾಮೂರ್ತಿ ಅವರು ಪ್ರಾರ್ಥನೆಯಲ್ಲಿ ಹೊರಹೊಮ್ಮಲಿದ್ದಾರೆ. ಚಿತ್ರದಲ್ಲಿ ಮೌಲ್ಯಯುತವಾದ ಸಂಭಾಷಣೆಯನ್ನು ಪ್ರೇಕ್ಷಕರು ನಿರೀಕ್ಷಿಸಬಹುದು. ವಿಶ್ವಸಂಸ್ಥೆಯ ವರದಿಯ ಪ್ರಕಾರ ವಿಶ್ವದಾದ್ಯಂತ 12000 ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಇದರಲ್ಲಿ ಕನ್ನಡ ಭಾಷೆಯೂ ಸೇರಿದೆ ಎಂಬುದು ದುಃಖದ ಸಂಗತಿ. ಭಾಷೆಗೆ ಸಂಬಂಧಿಸಿದಂತೆ ಮಜಬೂತಾದ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇನೆ ಎನ್ನುತಾರ ಶೆಣೈ.


Click it and Unblock the Notifications











