ರಾಕ್ಲೈನ್ ಸ್ಟೂಡಿಯೋದಲ್ಲಿ ‘ಐತಲಕ್ಕಡಿ’
ಅಂದು ರಾಕ್ಲೈನ್ ಸ್ಟೂಡಿಯೋ ಮದುವೆಮನೆಯಂತೆ ಕಂಗೊಳಿಸುತ್ತಿತ್ತು. ಎಲ್ಲಿ ನೋಡಿದರೂ ಜನ ಜಂಗುಳಿ. ಮಂಗಳ ವಾದ್ಯ, ಮಂತ್ರಘೋಷಗಳ ನಡುವೆ ಸಂಭ್ರಮದಿಂದ ನೆರವೇರುತ್ತಿದ್ದ ಮದುವೆಗೆ ಕೆಲವೇ ಕ್ಷಣಗಳಲ್ಲಿ ವಿಘ್ನ ಒದಗಿ ಬಂತು. ಮದುವೆಮನೆ ಪ್ರವೇಶಿಸಿದ ಖಳನಟ ವರನೊಂದಿಗೆ ವಾಗ್ವಾದ ನಡೆಸುತ್ತಾನೆ. ನಂತರ ಅವರಿಬ್ಬರ ನಡುವೆ ಹೊಡೆದಾಟವೂ ನಡೆಯುತ್ತದೆ.
ಸಂಭ್ರಮದಲ್ಲಿ ಮುಳುಗಿ ಹೋಗಿದ ಆ ಸ್ಥಳ ಸ್ವಲ್ಪ ಹೊತ್ತಿನ ನಂತರ ರಣರಂಗವಾಗಿ ಮಾರ್ಪಡುತ್ತದೆ. ಈ ಸನ್ನಿವೇಶವನ್ನು 'ಐತಲಕ್ಕಡಿ' ಚಿತ್ರಕ್ಕಾಗಿ ನಿರ್ದೇಶಕ ಜೆ.ಜಿ.ಕೃಷ್ಣ ಚಿತ್ರೀಕರಿಸಿಕೊಂಡರು. ವರನಾಗಿ ಬುಲೆಟ್ ಪ್ರಕಾಶ್, ವಧುವಾಗಿ ಋತು ಹಾಗೂ ಖಳನಟನ ಪಾತ್ರದಲ್ಲಿ ಶೋಭರಾಜ್ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಮೇಲಿನ ಸನ್ನಿವೇಶದ ಚಿತ್ರೀಕರಣದೊಂದಿಗೆ ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಚಿತ್ರಕುಟೀರ ನಿರ್ಮಾಣ ಸಂಸ್ಥೆ ತಿಳಿಸಿದೆ. ಸದ್ಯದಲ್ಲೇ ತೃತೀಯ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರ ಜನರ ಮನ್ನಣೆಗೆ ಪಾತ್ರವಾಗಲಿದೆ ಎಂದು ನಿರ್ದೇಶಕರು ನುಡಿದಿದ್ದಾರೆ.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಜೆ.ಜಿ.ಕೃಷ್ಣ ಅವರು ಚಿತ್ರಕ್ಕೆ ಛಾಯಾಗ್ರಹಣ ನೀಡುವುದರೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಾಧುಕೋಕಿಲಾರ ಸಂಗೀತ ಸಂಯೋಜನೆ, ತುಷಾರ ರಂಗನಾಥ್ ಸಂಭಾಷಣೆ, ಆರ್.ಡಿ.ರವಿ ಸಂಕಲನವಿರುವ 'ಐತಲಕ್ಕಡಿ" ಚಿತ್ರಕ್ಕಿದೆ.
ತಾರಾಬಳಗದಲ್ಲಿ ಜಗ್ಗೇಶ್, ವಿಜಯರಾಘವೇಂದ್ರ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ನೀತು, ಶೋಭ್ರಾಜ್, ಜೈಜಗದೀಶ್, ಕೋಮಲ್, ಶರಣ್, ಗಿರಿಜಾ ಲೋಕೇಶ್, ಪದ್ಮಜಾರಾವ್, ಕರಿಬಸವಯ್ಯ, ಮೋಹನ್ ಜುನೇಜಾ, ಬ್ಯಾಂಕ್ ಜನಾರ್ದನ್, ಎಂ.ಎಸ್.ಉಮೇಶ್, ಶಂಕರ್ರಾವ್, ದೊಡ್ಡಣ್ಣ, ಹರೀಶ್ರಾಯ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











