ಬೆಳ್ಳಿತೆರೆಗೆ ಬರಲಿದೆ ರವಿ ಬೆಳಗೆರೆ ಮತ್ತೊಂದು ಪುಸ್ತಕ
ಪತ್ರಕರ್ತ, ಲೇಖಕ ರವಿ ಬೆಳಗೆರೆ ಬರೆದ 'ಪಾಪಿಗಳ ಲೋಕದಲ್ಲಿ' ಪುಸ್ತಕದಲ್ಲಿನ ಸೋಮ ಕಥೆ ಈಗಾಗಲೆ ಡೆಡ್ಲಿ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಈಗ ನಿರ್ದೇಶಕ ರವಿ ಶ್ರೀವತ್ಸ ನೇರವಾಗಿ ರವಿಯ ಮತ್ತೊಂದು ಪುಸ್ತಕ 'ಭೀಮಾ ತೀರದ ಹಂತಕರಿ' ಗೆ ಕೈಹಾಕಿದ್ದಾರೆ.
ಪತ್ರಿಕೆಯೊಂದಕ್ಕೆ 2001ರಿಂದ 2003ರ ಅವಧಿಯಲ್ಲಿ ರವಿ ಬೆಳೆಗೆರೆ ಬರೆದ ಅಂಕಣ ಬರಹಗಳ ಗುಚ್ಛವೇ 'ಭೀಮಾ ತೀರದ ಹಂತಕರು' ಕೃತಿಯಾಗಿ ಹೊರಹೊಮ್ಮಿದೆ. ಈಗ ಇದನ್ನೆ ಚಿತ್ರ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ ಅಣಜಿ ನಾಗರಾಜ್. ಪುಸ್ತಕದ ಶೀರ್ಷಿಕೆ ಚಿತ್ರದ ಶೀರ್ಷಿಕೆಯು ಹೌದು. ಇದು ಹಂತಕರ ಕಥೆ ವ್ಯಥೆಯ ಸುತ್ತ ಹೆಣೆಯಲಾದ ಕತೆ.
ಚಿತ್ರದಲ್ಲಿ ಒಟ್ಟು ಏಳು ಮಂದಿ ನಾಯಕರು 'ಹಂತಕ'ರಾಗಿ ಕಾಣಿಸಿಕೊಳ್ಳಲಿದ್ದಾರೆ.ಮೂಲಗಳ ಪ್ರಕಾರ, ಸುದೀಪ್, ಆದಿತ್ಯ, ದಿಗಂತ್, ಶ್ರೀನಗರ ಕಿಟ್ಟಿ, ನಾಗಶೇಖರ್ 'ಹಂತಕ'ರಾಗುವ ಸಾಧ್ಯತೆಯಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ರಾಧಿಕಾ ಪಂಡಿತ್ ಹಾಗೂ 'ಗಂಡ ಹೆಂಡತಿ' ಸಂಜನಾ ಹೆಸರುಗಳು ಕೇಳಿಬಂದಿವೆ.
ಚಿತ್ರದಲ್ಲಿ ಜಂಬೋ ತಾರಾಗಣವಿರುವ ಕಾರಣ ಡೇಟ್ಸ್ ಹೊಂದಾಣಿಕೆಯಾಗುವುದು ಕಷ್ಟಕರ. ಅಣಜಿ ನಾಗರಾಜ್ ಹೇಗೆ ಸಂಭಾಳಿಸುತ್ತಾರೋ ಕಾದು ನೋಡೋಣ. ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ನಲ್ಲಿ ಹಂತಕರಿಗೆ ಮುಹೂರ್ತ ನಿಗದಿಪಡಿಸಿದ್ದಾರೆ ಅಣಜಿ.


Click it and Unblock the Notifications











