ನೆರೆ ಸಂತ್ರಸ್ತರಿಗೆ ಕೆಸಿಎನ್ ರು.1ಲಕ್ಷ ದೇಣಿಗೆ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನಿಧಿಗೆ ರು.1 ಲಕ್ಷ ದೇಣಿಗೆ ನೀಡಿದ್ದಾರೆ. ಚಂದ್ರು ನಿರ್ಮಾಣದ 'ಸಾರಥಿ' ಚಿತ್ರದ ಮುಹೂರ್ತದಲ್ಲಿ ಈ ನೆರೆ ಪರಿಹಾರವನ್ನು ಅವರು ಪ್ರಕಟಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದ ನಾಯಕ ನಟನಾಗಿರುವ ಈ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶಿಸುತ್ತಿದ್ದಾರೆ.
ಕೆಸಿಎನ್ ಚಂದ್ರಶೇಖರ್ ಸ್ವಂತ ಬ್ಯಾನರ್ ನಲ್ಲಿ ಸಾರಥಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ ಎಂದ ಅವರು ಉದಾರ ಮನಸ್ಸಿನಿಂದ ನೆರೆ ಸಂತ್ರಸ್ತರಿಗೆ ಒಂದು ಲಕ್ಷ ದೇಣಿಗೆಯನ್ನು ಪ್ರಕಟಿಸಿದ್ದಾರೆ. 'ಸಾರಥಿ' ಚಿತ್ರಕ್ಕೆ ಶೇ.10ರಷ್ಟು ಕಾಸ್ಟ್ ಕಟಿಂಗ್ ಮಾಡಲಾಗುತ್ತದೆ ಎಂದು ಕೆಸಿಎನ್ ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿರುವ ಕೆಸಿಎನ್ ಚಂದ್ರಶೇಖರ್, ಸಂಘದ ನೀತಿ ನಿಲುವುಗಳನ್ನು ರೂಪಿಸುವಲ್ಲಿ ಮಹತ್ವ ಪಾತ್ರ ವಹಿಸಿದ್ದರು. ಹಾಗಾಗಿ ಸಾರಥಿ ಚಿತ್ರಕೆ ಕಾಸ್ಟ್ ಕಟಿಂಗ್ ಮಾಡುತ್ತಾರಾ ಇಲ್ಲವೆ? ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೀಗ ಆ ಸಂಶಯವನ್ನು ದೂರ ಮಾಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











