ಕನ್ನಡ 'ಕೋಟೆ'ಯಲ್ಲಿ ಮಗಧೀರ ಡ್ಯಾನ್ಸ್ ಮಾಸ್ಟರ್
'ಕೋಟೆ' ಚಿತ್ರದ ಮುಹೂರ್ತ ಸಮಾರಂಭ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದಲ್ಲಿರುವ ರಾಯಪುರದ ಇಸ್ಕಾನ್ ದೇವಸ್ಥಾನದಲ್ಲಿ ಕಳೆದವಾರ ಆರಂಭವಾಯಿತು. ಸನ್ಮಾನ್ಯ ಸಚಿವರಾದ ಜಗದೀಶ್ ಶೆಟ್ಟರ್ ಪತ್ನಿ ಸಮೇತರಾಗಿ ಸಮಾರಂಭಕ್ಕೆ ಆಗಮಿಸಿ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಉತ್ತರ ಕರ್ನಾಟಕ ಪ್ರದರ್ಶಕರ ಮಹಾ ಮಂಡಳದ ಅಧ್ಯಕ್ಷರಾದ ಶ್ರೀರಂಗಣ್ಣ ಓದುಗೌಡರ್ ಕ್ಯಾಮೆರಾ ಚಾಲನೆ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರದರ್ಶಕರ ಮಹಾಮಂಡಳದ ಮಹಾವೀರ್ ಸೂಜಿ, ಅಮರ್ ಚಾಟ್ನಿ, ವೆಂಕಟರಮಣ ಬಾಬ್ಜೀ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಶಿವಶಂಕರ್ ಅವರಿಗೆ 'ಮಗಧೀರ' ಚಿತ್ರದ ನೃತ್ಯ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದ ಹಿನ್ನಲ್ಲೆಯಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ಶಿವಶಂಕರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಚಿತ್ರಕ್ಕೆ ಮುವತ್ತೈದು ದಿನಗಳ ಚಿತ್ರೀಕರಣ ನಡೆಯಲಿದೆ. ಪ್ರಜ್ವಲ್ದೇವರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯರು ಗಾಯಿತ್ರಿರಾವ್ ಮತ್ತು ಡಿಂಪಲ್. ನಟ ಸಾಯಿಕುಮಾರ್ ಅವರ ಸಹೋದರ, ಕಂಠದಾನ ಕಲಾವಿದ ಹಾಗೂ ನಟ ರವಿಶಂಕರ್ ಈ ಚಿತ್ರದ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶ್ರೀನಿವಾಸ್ರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೆ.ದತ್ತು ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ, ಡಿಫರೆಂಟ್ಡ್ಯಾನಿ ಸಾಹಸ, ಶಿವಶಂಕರ್, ಇಮ್ರಾನ್, ಹರೀಶ್ ಪೈ ನೃತ್ಯ ನಿರ್ದೇಶನ ಹಾಗೂ ಸುಧೀಂದ್ರ(ಹೊಸಳ್ಳಿ) ನಿರ್ಮಾಣ ನಿರ್ವಹಣೆ 'ಕೋಟೆ ಚಿತ್ರಕ್ಕಿದೆ. ಈ ಚಿತ್ರವನ್ನು ಕೆ ಕೆ ಫಿಲಂಸ್ ಲಾಂಛನದಲ್ಲಿ ಎಂ.ಮಂಜುನಾಥ್ ಅವರು ನಿರ್ಮಿಸುತ್ತಿದ್ದಾರೆ.


Click it and Unblock the Notifications











