ಸವಿತಾ ಸಮಾಜ ಕಲಾವಿದರೇ ನನ್ನ ಗುರುಗಳು: ಹಂಸಲೇಖ
ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಜಾನಪದ ಕಲಾವಿದರನ್ನು ವಿನಾ ಕಾರಣ ಅವಮಾನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆಪಾದನೆ ಕೇಳಿಬಂದಿತ್ತು. ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾಡಿರುವ ಈ ಆಪಾದನೆಯನ್ನು ಹಂಸಲೇಖ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಹಂಸಲೇಖ ಅವರು ಮಾಧ್ಯಮಗಳಿಗೆ ಕಳುಹಿಸಿ ಕೊಟ್ಟಿರುವ ಪತ್ರದ ಒಕ್ಕಣೆ ಹೀಗಿದೆ. "ನನ್ನ ಮೇಲೆ ವಿನಾಕಾರಣ ಎದ್ದಿರುವ ಅಪಪ್ರಚಾರಕ್ಕೆ ವಿಷಾದಿಸುತ್ತಾ ಸಾಮಾಜಿಕ ಸೌಹಾರ್ದತೆ ಕಾಪಾಡುವ ಹೊಣೆ ಅರಿತು ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ.ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ಸವಿತಾ ಸಮಾಜದವರ ಬಗ್ಗೆ ಅವಹೇಳನಕಾರಕ ಮಾತನಾಡಿದ್ದೇನೆಂದು ಆರೊಪಿಸಲಾಗಿದೆ. ಇದನ್ನು ಸ್ಪಷ್ಟವಾಗಿ ನಿರಾಕರಿಸುತ್ತಿದ್ದೇನೆ.
ಸವಿತಾ ಸಮಾಜದ ಕಲಾವಿದ ಬಂಧುಗಳೇ ನನ್ನ ಗುರುಗಳು. ನಾನು ಸವಿತಾ ಸಮಾಜದ ಬಂಧುಗಳ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನು ಇಟ್ಟುಕೊಂಡಿರುವವನು, ಅಷ್ಟೇ ಅಲ್ಲದೆ ತುಡಿತಕ್ಕೊಳಗಾದ ಯಾವುದೇ ಅವಮಾನಿತ ಸಮುದಾಯಗಳ ಬಗ್ಗೆ, ನನಗೆ ಅಪಾರ ಗೌರವವಿದೆ ಕಾಳಜಿ ಇದೆ. ಕಾರಣ ನಾನು ಕೂಡ ಅಂತದ್ದೇ ಸಮುದಾಯದಿಂದ ಬಂದವನು.
ಇಷ್ಟಾಗಿಯೂ ಸವಿತಾ ಸಮುದಾಯದ ನನ್ನ ಬಂಧುಗಳಿಗೆ ನನ್ನ ಕಡೆಯಿಂದ ಆ ರೀತಿಯ ನೋವು ಉಂಟಾಗಿದ್ದರೆ ಅದಕ್ಕೆ ನಾನು ಇಡೀ ನನ್ನ ಸವಿತಾ ಸಮುದಾಯದ ಗುರು ಹಿರಿಯಕ, ಬಂಧುಗಳ ಕ್ಷಮಾಪಣೆ ಬೇಡುತ್ತೇನೆ. ಅವರ ಆಶೀರ್ವಾದ ಸದಾ ನನಗೆ ಶ್ರೀರಕ್ಷೆ ಎಂಬುದನ್ನು ಈ ಮೂಲಕ ವಿನಂತಿಸ ಬಯಸುತ್ತೇನೆ". ಎಂದಿದ್ದಾರೆ.


Click it and Unblock the Notifications











