'ಸ್ಕೂಲ್ ಮಾಸ್ಟರ್' ಬಿಡುಗಡೆ ಹಿಂದಿನ ರಹಸ್ಯ!
ಸಾಹಸ ಸಿಂಹ ವಿಷ್ಣುವರ್ಧನ್ ಅವರ 199ನೇ ಚಿತ್ರ 'ಸ್ಕೂಲ್ ಮಾಸ್ಟರ್'. ಈ ಚಿತ್ರ ಜನವರಿ 22ರಂದು ರಾಜ್ಯದ 70 ಕೇಂದ್ರಗಳಲ್ಲಿ ತೆರೆಕಾಣಲಿದೆ. ದಿನವೊಂದಕ್ಕೆ 280 ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಕಣ್ಮನ ತಣಿಸಲು 'ಸ್ಕೂಲ್ ಮಾಸ್ಟರ್' ಅಣಿಯಾಗಿದೆ.
ಸರಿಸುಮಾರು ಒಂದು ವರ್ಷದಿಂದ 'ಸ್ಕೂಲ್ ಮಾಸ್ಟರ್' ಚಿತ್ರ ಬಿಡುಗಡೆಗಾಗಿ ಪ್ರಸವ ವೇದನೆ ಅನುಭವಿಸುತ್ತಿತ್ತ್ತು. ಇದೀಗ 'ಸ್ಕೂಲ್ ಮಾಸ್ಟರ್' ಚಿತ್ರವನ್ನು ನಿರ್ಮಾಪಕ ಸಿಆರ್ ಮನೋಹರ್ ದಿಢೀರನೆ ತೆರೆಗೆ ತರುತ್ತಿದ್ದಾರೆ. ವಿಷ್ಣು ನಿಧನದ ಅನುಕಂಪದ ಅಲೆ ಕೆಲಸ ಮಾಡುತ್ತದೆ ಎಂಬುದು ಅವರ ಎಣಿಕೆ.
ವಿಷ್ಣುವರ್ಧನ್ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಆಪ್ತರಕ್ಷಕ' ಜನವರಿ29ರಂದು ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ 'ಸ್ಕೂಲ್ ಮಾಸ್ಟರ್' ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬುದು ಸಿಆರ್ ಮನೋಹರ್ ಪಟ್ಟುಹಿಡಿದಿದ್ದರು. ಹಾಗಾಗಿ ಗೋಲ್ಡನ್ ಲಯನ್ ಫಿಲಂಸ್ ಲಾಂಛನದಲ್ಲಿ ಸ್ಕೂಲ್ ಮಾಸ್ಟರ್ ಚಿತ್ರ ತೆರೆಕಾಣುತ್ತಿದೆ.
ಕಳೆದ ವರ್ಷ ವಿಷ್ಣುವರ್ಧನ್ ಮಾಧ್ಯಮ ಮಿತ್ರರನ್ನು ಆಹ್ವಾನಿಸಿ 'ಸ್ಕೂಲ್ ಮಾಸ್ಟರ್' ಚಿತ್ರದ ಕೆಲವೊಂದು ಸನ್ನಿವೇಶಗಳನ್ನು ಪುನಃ ಚಿತ್ರೀಕರಿಸಲು ನಿರ್ಮಾಪಕರು ಬಯಸಿದ್ದಾರೆ. ಕೆಲವೊಂದು ಸಾಹಸ ಸನ್ನಿವೇಶಗಳನ್ನು ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದ್ದರು. ಆದರೆ ಈಗ ವಿಷ್ಣುವರ್ಧನ್ ಇಲ್ಲದ ಕಾರಣ ಚಿತ್ರವನ್ನು ತರಾತುರಿಯಲ್ಲಿ ಬಿಡುಗಡೆ ಮಾಡಲು ಮನೋಹರ್ ನಿರ್ಧರಿಸಿದ್ದಾರೆ ಎನ್ನುತ್ತವೆ ಮೂಲಗಳು.
ವಿಡಿಯೋ: ಕಣ್ಮರೆಯಾದ ಸಾಹಸ ಸಿಂಹ
ಕತೆ, ಚಿತ್ರಕತೆ, ಸಂಭಾಷಣೆ, ಛಾಯಾಗ್ರಹಣದ ಜೊತೆಗೆ ನಿರ್ದೇಶನದ ಜಬಾಬ್ದಾರಿಯನ್ನು ಹೊತ್ತಿದ್ದಾರೆ ದಿನೇಶ್ ಬಾಬು. 'ಮುಸ್ಸಂಜೆ ಮಾತು' ಖ್ಯಾತಿಯ ವಿ ಶ್ರೀಧರ್ ಸಂಗೀತ ಚಿತ್ರಕ್ಕಿದೆ. ತಾರಾಗಣದಲ್ಲಿ ದೇವರಾಜ್, ಅವಿನಾಶ್, ಮುಕೇಶ್ ರಿಷಿ, ಬೇಬಿ ಬೃಂದಾ, ಬೇಬಿ ಪ್ರೇರಣಾ ಹಾಗೂ ನಿರ್ಮಾಪಕ ಸಿಆರ್ ಮನೋಹರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ.


Click it and Unblock the Notifications











