ಬುಧವಾರ ಶಿವಣ್ಣ ಚಿತ್ರೀಕರಣಕ್ಕೆ ಚಕ್ಕರ್ ಹಾಕಿದ್ಯಾಕೆ?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರೀಕರಣಕ್ಕೆ ಹಂಗೆಲ್ಲಾ ಚಕ್ಕರ್ ಹಾಕುವವರಲ್ಲ. ಇಷ್ಟೊತ್ತಿಗೆ ಚಿತ್ರೀಕರಣಕ್ಕೆ ಜಾಗದಲ್ಲಿರಬೇಕು ಅಂದ್ರೆ ಅಷ್ಟೊತ್ತಿಗೆ ಶಿವಣ್ಣ ಅಲ್ಲಿರುತ್ತಾರೆ. ಶಿವಣ್ಣ ಯಾವತ್ತು ಈ ವಿಚಾರದಲ್ಲಿ ಹೆಸರು ಕೆಡಿಸಿಕೊಂಡವರಲ್ಲ, ವೃತ್ತಿಯಲ್ಲಿ ಅಷ್ಟೊಂದು ಕಟ್ಟುನಿಟ್ಟು. ಶಿಸ್ತುಬದ್ಧ ಜೀವನ ಶಿವಣ್ಣನಿಗೆ ವರನಟ ಡಾ.ರಾಜ್ ಕುಮಾರ್ ಅವರಿಂದಲೇ ಬಳುವಳಿಯಾಗಿ ಬಂದಿದೆ.
ಸಮಯಪಾಲನೆಯಲ್ಲಿ ಕರಾರುವಕ್ಕಾಗಿದ್ದ ಶಿವಣ್ಣ ಮೇ.19ರಂದು ಚಿತ್ರೀಕರಣಕ್ಕೆ ಹಾಜರಾಗಲಿಲ್ಲ, ಬಣ್ಣ ಹಚ್ಚ್ಚಿಕೊಳ್ಳಲಿಲ್ಲ. ಒಂದು ದಿನದ ಮಟ್ಟಿಗೆ ಶಿವಣ್ಣ ಚಿತ್ರರಂಗದ ಚಟುವಟಿಕೆಗಳಿಗೆ ಗುಡ್ ಬೈ ಹೇಳಿದ್ದರು. ಕಾರಣ ಏನು ಅಂತ ಹುಡುಕಿದರೆ ಆ ದಿನ ಶಿವಣ್ಣನ ಮದುವೆ ವಾರ್ಷಿಕೋತ್ಸವ!
ಮೇ.19ರ ಬುಧವಾರ ತಮ್ಮ ಗೆಳೆಯರು, ಕುಟುಂಬದವರೊಂದಿಗೆ ಶಿವಣ್ಣ ಕಾಲ ಕಳೆದಿದ್ದಾಗಿ ತಿಳಿಸಿದ್ದಾರೆ. ಹೆಬ್ಬಾಳ ಬಳಿಯ ಶಿವಣ್ಣನ ಮನೆ ಬಂಧು ಮಿತ್ರರಿಂದ ಗಿಜಿಗುಡುತ್ತಿತ್ತು. ಶಿವಣ್ಣನ ದಾಂಪತ್ಯ ಜೀವನಕ್ಕೆ ಶುಭ ಹಾರೈಸಲು ಹಲವು ಅಭಿಮಾನಿಗಳು ಅವರ ಮನೆಯ ಬಳಿ ಜಮಾಯಿಸಿದ್ದರು ಎಂಬುದು ಸುದ್ದಿ.


Click it and Unblock the Notifications











