ಅಪ್ಪು ಪಪ್ಪ್ಪು ಚಿತ್ರಕ್ಕೆ ಹಂದಿಜ್ವರ ಕಾಟ!
ಎಲ್ಲವೂ ನೆಟ್ಟಗಿದ್ದಿದ್ದರೆ ಮಲೇಷಿಯಾದ ಕನಸಲ್ಲಿ ಲಗೇಜ್ ರೆಡಿಮಾಡಿಕೊಳ್ಳಬೇಕಿದ್ದ "ಅಪ್ಪು ಪಪ್ಪು" ಚಿತ್ರತಂಡ ಹಂದಿಜ್ವರದ ಬಾಧೆಯಿಂದ ತನ್ನ ಕನಸನ್ನು ಮುಂದಕ್ಕೆ ಹಾಕಿದೆ. "ಅಪ್ಪು ಪಪ್ಪು" ಚಿತ್ರ ಮುಂದಕ್ಕೆ ಹೋಗಿರುವುದನ್ನು ನಾಯಕ ನಟ ಕೋಮಲ್ ದೃಢಪಡಿಸಿದ್ದಾರೆ.
'ಒರಾಂಗ್ ಉಟಾನ್' ಚಿತ್ರದ ಪ್ರಮುಖ ಪಾತ್ರಗಳಲ್ಲೊಂದು. ಮಲೇಷಿಯಾದಲ್ಲಿ ಚಿತ್ರೀಕರಣ ನಡೆಯಬೇಕಾಗಿತ್ತು. ಅಲ್ಲೀಗ ಎಚ್1ಎನ್1 ಹಾವಳಿ. ಇದು ಸಾಂಕ್ರಾಮಿಕ ರೋಗವಾದುದರಿಂದ, ಚಿತ್ರೀಕರಣ ಸಮಯದಲ್ಲಿ ಒರಾಂಗ್ ಉಟಾನ್ಗಳಿಗೆ ಸೋಂಕು ತಗುಲಬಹುದು ಎನ್ನುವ ಭೀತಿ ಮೃಗಾಲಯದ ಅಧಿಕಾರಿಗಳದ್ದು. ಆ ಕಾರಣದಿಂದಾಗಿ ಚಿತ್ರೀಕರಣಕ್ಕೆ ಅನುಮತಿ ಪಡೆಯಲು ಕಷ್ಟವಾಗುತ್ತಿದೆ' ಎಂದು ಚಿತ್ರ ಮುಂದಕ್ಕೆ ಹೋಗಿರುವ ಕಾರಣವನ್ನು ಕೋಮಲ್ ವಿವರಿಸಿದರು.
ಮೂರು ತಿಂಗಳ ಕಾಲ "ಅಪ್ಪು ಪಪ್ಪು" ಚಿತ್ರ ಮುಂದಕ್ಕೆ ಹಾಕಲಾಗಿದೆ. ಹಾಗಾದರೆ ಕೋಮಲ್ ಅವರ ಮುಂದಿನ ಚಿತ್ರ ಯಾವುದು? 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್ (ಕೋಮಲ್ರ ಸಂಬಂಧಿ) ಮತ್ತೊಂದು ಚಿತ್ರವನ್ನು ಕೋಮಲ್ಗಾಗಿ ನಿರ್ಮಿಸುತ್ತಿದ್ದಾರೆ.
'ನಂದೀಶ್' ಎನ್ನುವ ಈ ಸಿನಿಮಾದ ಚಿತ್ರಕಥೆ ಇನ್ನೂ ಪಕ್ಕಾ ಆಗಿಲ್ಲ. ನೆರೆಭಾಷೆಯ ಪೋಷಕ ನಟರನ್ನೂ ಚಿತ್ರದಲ್ಲಿ ಬಳಸಿಕೊಳ್ಳುವ ಉದ್ದೇಶ ಚಿತ್ರತಂಡಕ್ಕಿದೆಯಂತೆ. "ಮಸ್ತ್ ಮಜಾ ಮಾಡಿ" ಎರಡನೇ ಭಾಗವೂ ಸೆಟ್ಟೇರಲು ಸಿದ್ಧತೆ ನಡೆಸುತ್ತಿದೆ. ಅದರ ಹೆಸರು 'ಮತ್ತೆ ಮಸ್ತ್ ಮಜಾ ಮಾಡಿ'. ಇವೆರಡು ಚಿತ್ರಗಳ ನಂತರವೇ 'ಅಪ್ಪು ಪಪ್ಪು'. ಅಲ್ಲಿಗೆ ಒರಾಂಗ್ ಉಟಾನ್ ಹಾಗೂ ಕೋಮಲ್ ಜೋಡಿ ಕಣ್ತುಂಬಿಕೊಳ್ಳುವುದು 2010ರಲ್ಲೇ ಎಂದಾಯಿತು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











