ಮಳೆ ವೈಭವದಲ್ಲಿ ಮಲ್ಲಿಕಾರ್ಜುನ ಚಿತ್ರೀಕರಣ
ಕರ್ನಾಟಕದಾದ್ಯಂತ ಧೋ ಎಂದು ಮಳೆ ಸುರಿಯುತ್ತಿದೆ. ಇನ್ನು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಸಕಲೇಶಪುರದಲ್ಲಿ ಕೇಳಬೇಕೆ. ಅಲ್ಲೂ ಮಳೆಯ ವೈಭವ. ಇಲ್ಲಿನ ರಮಣೀಯ ವಾತಾವರಣ ಮಳೆಗಾಲದಲ್ಲಿ ಬಣ್ಣಿಸಲು ಅಸಾಧ್ಯ. ಇಂಥ ರಮಣೀಯ ತಾಣದಲ್ಲಿ ಎಸ್.ಎಸ್ ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ,ದಿನೇಶ್ಗಾಂಧಿ ನಿರ್ಮಿಸುತ್ತಿರುವ 'ಮಲ್ಲಿಕಾರ್ಜುನ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
'ಮಲ್ಲಿಕಾರ್ಜುನ' ಚಿತ್ರದ ಚಿತ್ರೀಕರಣ ಮಲ್ಲಿಕಾರ್ಜುನ ದೇವಾಲಯದ ಎದುರಿನಲ್ಲಿ ನಡೆಯುತ್ತಿರುವುದು ವಿಶೇಷ. ದಿನದ ಹೆಚ್ಚು ಹೊತ್ತು ಇಲ್ಲಿ ಮಳೆ ಸುರಿಯುತ್ತಿದ್ದರೂ ಚಿತ್ರೀಕರಣ ಯಾವುದೇ ತೊಂದರೆ ಇಲ್ಲದೆ ಸಾಗುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ನಾಯಕನ ಅಕ್ಕನ ಮಗಳ ಮೇಲೆ ಅತ್ಯಾಚಾರವೆಸಗಲು ವಿಲನ್ ಆಗಮಿಸುತ್ತಾನೆ. ಅದೆ ಸಮಯಕ್ಕೆ ಅಲ್ಲಿಗೆ ಬಂದ ನಾಯಕ ಅಕ್ಕನ ಮಗಳ ಮಾನ ರಕ್ಷಣೆಗೆ ಮುಂದಾಗುತ್ತಾನೆ.
ಅತ್ಯಾಚಾರವೆಸಗಲು ಬಂದವನಿಗೆ ತಕ್ಕ ಶಾಸ್ತಿ ಮಾಡುತ್ತಾನೆ. ಈ ಸನ್ನಿವೇಶವನ್ನು 'ಮಲ್ಲಿಕಾರ್ಜುನ' ಚಿತ್ರಕ್ಕಾಗಿ ನಿರ್ದೇಶಕ ಮುರಳಿಮೋಹನ್ ಚಿತ್ರಿಸಿಕೊಂಡರು. ರವಿಚಂದ್ರನ್, ಸುದೀಪ್ತೋ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಹೇಮಚೌಧರಿ, ರಾಜುತಾಳಿಕೋಟೆ, ದಿನೇಶ್ಗಾಂಧಿ ಮುಂತಾದವರು ಅಭಿನಯಿಸಿದ ಕೆಲವು ದೃಶ್ಯಗಳನ್ನು ಸಕಲೇಶಪುರದಲ್ಲಿ ನಿರ್ಮಿಸಲಾಗಿರುವ ಮನೆಯ ಸೆಟ್ನಲ್ಲಿ ಚಿತ್ರಿಸಿಕೊಳ್ಳಲಾಯಿತು ಎನ್ನುತ್ತಾರೆ ನಿರ್ದೇಶಕರು.
ರವಿಚಂದ್ರನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಎಸ್.ಎ.ರಾಜಕುಮಾರ್ ಅವರ ಸಂಗೀತವಿದೆ. ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣವಿರುವ ಚಿತ್ರದ ತಾರಾಬಳಗದಲ್ಲಿ ರವಿಚಂದ್ರನ್, ಸೀತಾ, ರಾಗಿಣಿ, ಸುದೀಪ್ತೋ, ಆಶೀಷ್ವಿದ್ಯಾರ್ಥಿ, ಹೇಮಾಚೌಧರಿ, ಆದಿಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ರಾಜುತಾಳಿಕೋಟೆ, ದಿನೇಶ್ಗಾಂಧಿ ಮುಂತಾದವರ ಅಭಿನಯವಿದೆ.


Click it and Unblock the Notifications











