ಐಂದ್ರಿತಾರ ದಂತ ವೈದ್ಯೆಯ ಕನಸು ನುಚ್ಚು ನೂರು!
ನನ್ನ ಮೊದಲ ಆದ್ಯತೆ ಶಿಕ್ಷಣ ಆನಂತರವಷ್ಟೇ ಸಿನಿಮಾ ಎಂದು ಬಹುತೇಕ ನಟಿಯರು ಗಿಳಿಪಾಠ ಒಪ್ಪಿಸುತ್ತಾರೆ. ಇದಕ್ಕೆ ಚಿಗರೆ ಕಂಗಳ ನಟಿ ಐಂದ್ರಿತಾ ರೇ ಸಹ ಹೊರತಲ್ಲ. ಆರಂಭದಲ್ಲಿ ಶಿಕ್ಷಣವೇ ಮುಖ್ಯ ಎನ್ನುತ್ತಿದ್ದ ನಟಿ ಈಗ ಬಿಡಿಎಸ್ ಪದವಿಯನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ. ಸಿನಿಮಾ ಏನಿದ್ದರೂ ಪಾರ್ಟ್ ಟೈಂ ಕೆಲಸ ಎನ್ನುತ್ತಿದ್ದ ನಟಿ ಈಗ ಅದನ್ನೇ ಫುಲ್ ಟೈಂ ಕೆಲಸವಾಗಿ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನಲ್ಲಿ ದಂತವೈದ್ಯಕೀಯವನ್ನು(ಬಿಡಿಎಸ್) ಅಭ್ಯಸಿಸುತ್ತಿರುವ ಐಂದ್ರಿತಾ ಓದಿಗೆ ತಿಲಾಂಜಲಿ ಇಟ್ಟಿದ್ದಾರೆ. ಎರಡು ದೋಣಿಗಳ ಪಯಣ ತರವಲ್ಲ ಎಂಬುದನ್ನು ಐಂದ್ರಿತಾ ತಡವಾಗಿಯಾದರೂ ಗುರಿತಿಸಿದ್ದಾರೆ. ಹಾಗಾಗಿ ಸಿನಿಮಾ ಎಂಬ ದೋಣಿಯಲ್ಲಿ ಕನ್ನಡ ಚಿತ್ರ ಸಾಗರದವನ್ನು ದಾಟಲು ಹೊರಟಿದ್ದಾರೆ.
ಐಂದ್ರಿತಾ ಕನ್ನಡ ಚಿತ್ರೋದ್ಯಮದಲ್ಲಿ ಸದ್ಯಕ್ಕೆ ಬಿಜಿಯಾಗಿರುವ ನಟಿ. ಆಕೆಯ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಈಗಿರುವ ಚಿತ್ರಗಳಲ್ಲಿ ಅಭಿನಯಿಸುವುದಷ್ಟೇ ಆಕೆಯ ಮುಂದಿನ ಗುರಿ. ಹಾಗಾಗಿ ಓದಿನ ಕಡೆ ಹೆಚ್ಚು ಗಮನ ಕೊಡಲು ಆಗುತ್ತ್ತಿಲ್ಲ. ಆ ಕಾರಣಕ್ಕಾಗಿ ಓದನ್ನು ಅರ್ಧಕ್ಕೆ ಬಿಡುತ್ತಿದ್ದೇನೆ ಎನ್ನುತ್ತಾರೆ ಚಿಗರೆ ಕಂಗಳ ನಟಿ.
ಸದ್ಯಕ್ಕೆ 'ಧೂಳ್' ಎಂಬ ಚಿತ್ರದಲ್ಲಿ ಯೋಗೀಶ್ ಗೆ ಜತೆಯಾಗಿ ಐಂದ್ರಿತಾ ನಟಿಸುತ್ತಿದ್ದಾರೆ. ತಮಿಳು ಚಿತ್ರದ ರೀಮೇಕ್ ಇದಾಗಿದೆ. ಆದರೆ ಐಂದ್ರಿತಾಗೆ ರೀಮೇಕ್ ಚಿತ್ರಗಳೆಂದರೆ ಅಲರ್ಜಿ. ರೀಮೇಕ್ ಚಿತ್ರಗಳಿಗೆ ನಿಷೇಧ ಹೇರಬೇಕು ಎಂದು 'ಧೂಳ್ 'ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ಕಡ್ಡಿ ಮುರಿದಂತೆ ಹೇಳಿ ನಿರ್ದೇಶಕರ ಹುಬ್ಬೇರಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











