ಸರಕಾರಿ ಅಧಿಕಾರಿಗಳ 'ಬಣ್ಣ'ದ ಕದ ಮುಚ್ಚಿದ ಹೈಕೋರ್ಟ್

ಸರಕಾರಿ ಆದೇಶವನ್ನು ಪ್ರಶ್ನಿಸಿ, ಅಧಿಕಾರಿಗಳಿಗೆ ನಟಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ 'ಬಾ ನಲ್ಲೆ ಮಧುಚಂದ್ರಕೆ' ಖ್ಯಾತಿಯ ಐಎಎಸ್ ಅಧಿಕಾರಿ ಕೆ ಶಿವರಾಮು ಅವರು ರಾಜ್ಯ ಉಚ್ಚ ನ್ಯಾಯಾಲಯ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರಿದ್ದ ಪೀಠ 2004ರಲ್ಲಿ ಶಿವರಾಮು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದೆ.
ಕೇಂದ್ರ ವಿದೇಶಾಂಗ ಸಚಿವರಾಗಿರುವ ಎಸ್ಎಂ ಕೃಷ್ಣ ಅವರು ಅಂದು ಮುಖ್ಯಮಂತ್ರಿಯಾಗಿದ್ದಾಗ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಗಳು ಕರ್ತವ್ಯವನ್ನು ಬದಿಗೊತ್ತಿ ಸಿನೆಮಾದಲ್ಲಿ ನಟಿಸಬಾರದು ಎಂದು ಮಾರ್ಚ್ 9, 2004ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಿವರಾಮು ಪ್ರಶ್ನಿಸಿದ್ದರು.
ಹೊಟ್ಟೆ ತುಂಬಿಸುವ ವೃತ್ತಿಯ ಜೊತೆಗೆ ಬಣ್ಣ ಹಚ್ಚುವ ಕಾಯಕಕ್ಕೂ ಅವಕಾಶ ಮಾಡಿಕೊಡಬೇಕು. ನಟಿಸಲು ಚಿಕ್ಕಾಸೂ ಪಡೆಯುವುದಿಲ್ಲ ಎಂಬ ಶಿವರಾಮು ಕೋರಿಕೆಯನ್ನು ಹೈಕೋರ್ಟ್ ಒಪ್ಪಿಕೊಂಡಿಲ್ಲ. ನಟ ಹಣ ಪಡೆಯದಿದ್ದರೂ ಸಿನೆಮಾ ಒಂದು ವ್ಯಾಪಾರವಾದ್ದರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಿನೆಮಾದಲ್ಲಿ ಸರಕಾರಿ ಅಧಿಕಾರಿ ಭಾಗಿಯಾಗುವುದು ಸಲ್ಲದು ಎಂದು ಖಡಾಖಂಡಿತವಾಗಿ ಹೇಳಿದೆ. ಸಾಕಷ್ಟು ಶ್ರಮ ಬೇಡುವ ಸಿನೆಮಾಗಳಲ್ಲಿ ನಟಿಸುವುದನ್ನು ಬಿಟ್ಟರೆ ಸರಕಾರಿ ವೃತ್ತಿಯಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಬಹುದೆಂದು ಸಂದೇಶ ಕರ್ನಾಟಕ ಹೈಕೋರ್ಟ್ ನೀಡಿದೆ.
ಅಧಿಕಾರಿಗಳನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದಾಗ ಮಾಜಿ ಐಪಿಎಸ್ ಆಫೀಸರ್ ಬಿಸಿ ಪಾಟೀಲ್, ನೌಕರಿಗೆ ಸಲಾಂ ಹೊಡೆದು ಬಣ್ಣದ ಲೋಕವನ್ನು ಆಯ್ಕೆ ಮಾಡಿಕೊಂಡಿದ್ದರು. ನಂತರ ರಾಜಕೀಯಕ್ಕೂ ಇಳಿದು ಹಿರೆಕೇರೂರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸೌಧದಲ್ಲಿ ಕುಳಿತಿದ್ದಾರೆ. ಈ ಇಬ್ಬರೂ ನಟರು ಸಿನೆಮಾ ರಂಗದಲ್ಲೂ ಸಾಧಿಸಿದ್ದು ಅಷ್ಟಕ್ಕಷ್ಟೇ ಎಂಬುದು ಇಲ್ಲಿ ಗಮನಿಸತಕ್ಕ ವಿಚಾರ.


Click it and Unblock the Notifications











