ಪ್ರಕಾಶ್ ಚೊಚ್ಚಲ ನಿರ್ದೇಶನದಲ್ಲಿ ಐದು ಒಂದ್ಲ ಐದು
ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ನಿರ್ದೇಶಕ ವಿ ಕೆ ಪ್ರಕಾಶ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಆಕ್ಷನ್, ಕಟ್ ಹೇಳಲಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರದ ಹೆಸರು 'ಐದು ಒಂದ್ಲ ಐದು'. ಈ ಚಿತ್ರ ಸೆಪ್ಟೆಂಬರ್ ನಲ್ಲಿ ಸೆಟ್ಟೇರಲಿದೆ. ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಸಾಕಷ್ಟು ಅಧ್ಯಯನ ಮಾಡಿರುವ ಪ್ರಕಾಶ್ ಅವರಿಗೆ ಕನ್ನಡ ಚಿತ್ರ ನಿರ್ದೇಶಿಸಲು ಸಮಸ್ಯೆಯೇನು ಇಲ್ಲವಂತೆ . ಕನ್ನಡದಲ್ಲಿ ನಿರ್ದೇಶಿಸಬೇಕು ಎಂಬುದು ಅವರ ಬಹುದಿನಗಳ ಕನಸು.
ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾ, ಉತ್ತಮ ಕತೆಗಾಗಿ ಕಾಯಬೇಕಾಯಿತು. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಗೊಂಡಿದ್ದೇನೆ. ಕನ್ನಡ ಚಿತ್ರೋದ್ಯಮ ಮತ್ತು ರಂಗಭೂಮಿಯೊಂದಿಗೆ ನನಗೆ ಸಂಪರ್ಕವಿದೆ. ಸುದೀರ್ಘ ಸಮಯ ಕಾದಿದ್ದಕ್ಕೆ ಒಳ್ಳೆಯ ಚಿತ್ರಕತೆ ಸಿಕ್ಕಿದೆ ಎನ್ನುತ್ತಾರೆ.
ಏನಿದು 'ಐದು ಒಂದ್ಲ ಐದು' ಎಂದು ಕೇಳಿದರೆ, ಅವರು ಹೇಳಿದ್ದಿಷ್ಟು; ಮಲಯಾಳಂ ನಟ ದಿಲೀಪ್ ಚಿತ್ರದಲ್ಲಿ ನಿರ್ದೇಶಕನಾಗಿ ಕಾಣಿಸಲಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ನಿರ್ದೇಶಕನ ಪಾತ್ರವದು. ನಾಲ್ಕು ನಾಟಕಗಳನ್ನು ಒಂದೇ ಸಿನಿಮಾ ಮಾಡುವುದು ಹೇಗೆ ಎಂಬುದು ಚಿತ್ರದ ಕಥೆ.
ಚಿತ್ರದಲ್ಲಿ ಬರುವ ನಿರ್ದೇಶಕನಿಗೆ ಜನ ಉಚಿತ ಸಲಹೆಗಳನ್ನು ಕೊಡುತ್ತಿರುತ್ತಾರೆ. ಚಿತ್ರ ಭರ್ಜರಿಯಾಗಿ ಓಡಬೇಕಾದರೆ ಒಂದು ಐಟಂ ಸಾಂಗ್ ಇರಬೇಕು ಹಾಗೆ ಹೀಗೆ ಎಂದು ತಲೆಗೊಂದು ಹೇಳುತ್ತಿರುತ್ತಾರೆ. ಆದರೆ ಈ ಚಿತ್ರವನ್ನು ನಿರ್ಮಿಸಲು ಯಾವ ನಿರ್ಮಾಪಕನು ಮುಂದೆ ಬರುವುದಿಲ್ಲ. ಕಡೆಗೆ ನಿರ್ದೇಶಕನೇ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊರುತ್ತಾನೆ.
ಒಂಥರಾ ವಿಭಿನ್ನವಾಗಿರುವ ಈ ಚಿತ್ರದತಾರಾಬಳಗದಲ್ಲಿ ಪದ್ಮಪ್ರಿಯಾ, ಶ್ರುತಿ, ಹರೀಶ್ ರಾಜ್, ದೇವರಾಜ್, ಸಿ ಆರ್ ಸಿಂಹ, ನಿತ್ಯಾ ಮೆನನ್, ಅಜಿತ್ ಹಂಡೆ , ಪ್ರಕಾಶ್ ಅವರ ಸಹಾಯಕಿ ರಶ್ಮಿ ವೃಂದಾ ಮುಂತಾದವರಿದ್ದಾರೆ. ಕೆ ಯು ಮೋಹನನ್ ಸೇರಿದಂತೆ ಐದು ಮಂದಿ ಛಾಯಾಗ್ರಾಹಕರು. ವಿಜಯ ಪ್ರಕಾಶ್ ಸೇರಿದಂತೆ ಐದು ಮಂದಿ ಸಂಗೀತ ನಿರ್ದೇಶಕರು ಐದು ಒಂದ್ಲ ಐದು ಚಿತ್ರಕ್ಕಿದೆ.


Click it and Unblock the Notifications











