ಡಿಸೆಂಬರ್ ನಲ್ಲಿ ತೆಲುಗಿನ ನಾಗವಲ್ಲಿ ಬರ್ತಾಳೆ
ಈ ಹಿಂದೆ ತೆಲುಗು ಆಪ್ತರಕ್ಷಕ ಚಿತ್ರದಲ್ಲಿ ದಿವಂಗತ ಎನ್ಟಿಆರ್ ಮಗ ಬಾಲಕೃಷ್ಣ ನಟಿಸಲಿದ್ದಾರೆ. ಅನುಷ್ಕಾ ಶೆಟ್ಟಿ ನಾಗವಲ್ಲಿಯಾಗಿ ನರ್ತಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಕನ್ನಡ ಆಪ್ತರಕ್ಷಕದ ಯಶಸ್ಸಿನ ನಂತರ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಮುಖ್ಯಭೂಮಿಕೆಯಲ್ಲಿ ಚಿತ್ರ ಡಿಸೆಂಬರ್ 2 ರಂದು ತೆರೆಕಾಣಲಿದೆ ಎಂದು ನಿರ್ದೇಶಕ ಪಿ ವಾಸು ಸ್ಪಷ್ಟಪಡಿಸಿದ್ದಾರೆ.
ವಿಷ್ಣು ಇಲ್ಲದೇ ಬೇರೆ ಯಾರಾದ್ರೂ ಆ ಪಾತ್ರ ಮಾಡಿದ್ರೆ ಜನ ಖಂಡಿತಾ ಮೆಚ್ಚುತ್ತಿರಲಿಲ್ಲ ಎಂಬ ಮಾತಿದೆಯಲ್ಲ ಎಂದು ನಿರ್ದೇಶಕ ವಾಸು ಅವರನ್ನು ಕೇಳಿದರೆ, ಅದು ನಿಜ. ವಿಷ್ಣು ಸಾರ್ ಅವರ ಖದರ್ ಆ ರೀತಿ ಇತ್ತು. ಅವರಕ್ಕೆ ಪೋಷಣೆ ಮಾಡುವುದಿರಲಿ, ಪಾತ್ರವೇ ಅವರಾಗಿ ಬಿಡುತ್ತಿದ್ದರು. ಇವತ್ತು ನಾವು ಈ ಚಿತ್ರವನ್ನು ತೆಲುಗು. ತಮಿಳು ಮತ್ತೊಂದು ಭಾಷೆಗೆ ಕೊಂಡೊಯ್ಯಬಹುದು ಆದರೆ ಅದಕ್ಕೆಲ್ಲ ಮೂಲ ಕಾರಣ ವಿಷ್ಣು ಸಾರ್, ಸೌಂದರ್ಯ ಅವರು ಚಿತ್ರವನ್ನು ಬೆಳೆಸಿದ ರೀತಿ ಎಂಬುದನ್ನು ವಾಸು ಒಪ್ಪಿಕೊಂಡರು.
ತೆಲುಗಿನ ನಾಗವಲ್ಲಿ-ಚಂದ್ರಮುಖಿ 2ರಲ್ಲಿ ಅರುಂಧತಿ ಚಿತ್ರ ಖ್ಯಾತಿಯ ಅನುಷ್ಕಾ ಶೆಟ್ಟಿ ನಿರ್ವಹಿಸುತ್ತಿದ್ದು, ಕಮಲಿನಿ ಮುಖರ್ಜಿ, ರಿಚಾ ಗಂಗೋಪೊಧ್ಯಾಯ್, ಶ್ರದ್ಧಾ ದಾಸ್ ಮುಂತಾದವರು ಸಾಥ್ ನೀಡುತ್ತಿದ್ದಾರೆ.
ರಾಮಚಂದ್ರ ಆಚಾರ್ಯ, ಡಾ. ವಿಜಯ್ ಪಾತ್ರಗಳು ಹಾಗೆ ಉಳಿಸಿಕೊಳ್ಳಲಾಗಿದ್ದು, ಅಲ್ಪಸ್ವಲ್ಪ ಬದಲಾವಣೆಗಳು ಮಾಡಲಾಗಿದೆ. ಕನ್ನಡದ ನಂ.1 ಹಾಸ್ಯ ನಟ ಕೋಮಲ್ ಕೂಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ವಿಚಿತ್ರ ತಿರುವುಗಳಿಂದ ಕೂಡಿರುವ ಚಿತ್ರಕ್ಕೆ ಕೊಂಚ ಗ್ರಾಫಿಕ್ಸ್ ಟಚ್ ನೀಡಿ ರಿಮೇಕ್ ಮಾಡಲಾಗಿದೆಯಂತೆ.
ಚಂದ್ರಮುಖಿ 2 ರಲ್ಲಿ ದ್ವಿಪಾತ್ರದಲ್ಲಿ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ನಿರ್ವಹಿಸಬೇಕಿತ್ತು. ಆದರೆ, ಶಂಕರ್ ನಿರ್ದೇಶನದ 'ಎಂಧಿರನ್' ಚಿತ್ರ ಒಪ್ಪಿಕೊಂಡುಬಿಟ್ಟರು. ಅಜಿತ್ ಹಾಕಿಕೊಳ್ಳಿ ಎಂದು ರಜಿನಿ ಸಲಹೆ ನೀಡಿದ್ದರೂ, ಅಜಿತ್ ಕೂಡಾ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗಿಬಿಟ್ಟರು. ಕಡೆಗೆ ಇತ್ತೀಚೆಗೆ ಸಾಫ್ಟ್ ಕ್ಯಾರೆಕ್ಟರ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವೆಂಕಟೇಶ್ ಅವರ ಪಾಲಿಗೆ ಈ ಮಹತ್ವದ ಪಾತ್ರ ಸಿಕ್ಕಿದೆ. ತಮಿಳಿನಲ್ಲಿ ಇದೇ ಚಿತ್ರ 'ಪುಲಿ ವೇಷಂ' ಎಂಬ ಹೆಸರಿನಲ್ಲಿ ಬರುವ ಸಾಧ್ಯತೆಯಿದೆ.


Click it and Unblock the Notifications











