ಕಲಿಯುಗ ಕರ್ಣ ಸಿಟ್ಟಾಗವ್ರೆ ಕಣಣ್ಣೋ, ಶಿವ ಶಿವಾ!
ಕಲಿಯುಗ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಸಿಟ್ಟಾಗವ್ರೆ. ಸುಮ್ಮ ಸುಮ್ಮನೆ ಸಿಟ್ಟಾಗುವ ಜಾಯಮಾನ ಈ ಮಳವಳ್ಳಿ ಗಂಡಿನದಲ್ಲ. ಅಂಬರೀಷರ ಕೋಪಕ್ಕೆ ಬಲವಾದ ಕಾರಣವೊಂದು ಇರಲೇಬೇಕಲ್ಲ. ಹೌದು ಈ ಬಾರಿ ಅಂಬರೀಷ್ ಕೆಂಗಣ್ಣಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ ಸಿಸಿ) ಎಂಬ ಸ್ವತಂತ್ರ ಸಂಸ್ಥೆ ಗುರಿಯಾಗಿದೆ.
ಅಂಬಿ ಜೊತೆ ಕಲಾ ಸಾಮ್ರಾಟ್ ಎಸ್ ನಾರಾಯಣ್ 'ವೀರ ಪರಂಪರೆ' ಚಿತ್ರ ತೆಗೆಯುತ್ತಿರುವುದು ಗೊತ್ತೇ ಇದೆಯಲ್ಲಾ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಎಸ್ ನಾರಾಯಣ್ ಪತ್ರಿಕೆಗಳಿಗೆ ಒಂದಿಡಿ ಪುಟ ತುಂಬುವಷ್ಟು ಜಾಹೀರಾತು ನೀಡಿ ಫಿಲಂ ಚೇಂಬರ್ ನಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಮೇ.29ಕ್ಕೆ ಅಂಬರೀಷ್ 59ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಅಂಬಿಗೆ ಶುಭಾಶಯ ತಿಳಿಸುವ ನೆಪದಲ್ಲಿ 'ವೀರಪರಂಪರೆ'ಚಿತ್ರದ ಜಾಹೀರಾತನ್ನು ನೀಡಿದ್ದಾರೆ. ಕೆಎಫ್ ಸಿಸಿ ನಿಯಮಗಳ ಪ್ರಕಾರ ಚಿತ್ರವೊಂದು ಬಿಡುಗಡೆಯಾಗುವ ತನಕ ಯಾವುದೇ ಪತ್ರಿಕೆಗಳಿಗೆ ಒಂದಿಡಿ ಪುಟ ಜಾಹೀರಾತು ನೀಡಬಾರದು ಎಂಬ ನಿಯಮವಿದೆ.
ಈ ನಿಯಮವನ್ನು ಎಸ್ ನಾರಾಯಣ್ ಉಲ್ಲಂಘಿಸಿದ್ದಾರೆ ಎಂದು ಫಿಲಂ ಚೇಂಬರ್ ಆರೋಪಿಸಿದೆ. ಚಿತ್ರ ನಿರ್ಮಾಣದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಸಲುವಾಗಿ ಈ ನಿಯಮವನ್ನು ಜಾರಿಗೆ ತರಲಾಗಿತ್ತು. ಈ ನಿಯಮದ ಹಿಂದೆ ಕಡಿಮೆ ಬಜೆಟ್ ಚಿತ್ರಗಳಿಗೆ ಅನುಕೂಲವಾಗುವ ಉದ್ದೇಶವೂ ಇತ್ತು.
ಈ ನಿಯಮಗಳೇನು ಚೆನ್ನಾಗಿವೆ. ಚಲನಚಿತ್ರಗಳಿಗೆ ಅನ್ವಯಿಸಬೇಕಾದ ಈ ಜಾಹೀರಾತು ನಿಯಮ ತಾರೆಗಳ ಹುಟ್ಟುಹಬ್ಬಕ್ಕೆ ಯಾಕೆ ಥಳುಕು ಹಾಕುತ್ತೀರಾ ಎಂದು ಫಿಲಂ ಚೇಂಬರ್ ಗಮನಕ್ಕೆ ತಂದಾಗ. ಈ ನಿಯಮ ಇಡೀ ಚಿತ್ರೋದ್ಯಮಕ್ಕೆ ಅನ್ವಯಿಸುತ್ತದೆ. ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ಹುಟ್ಟುಹಬ್ಬದ ನೆಪದಲ್ಲಿ ಚಿತ್ರದ ಜಾಹೀರಾತು ನೀಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಎತ್ತಲಾಗಿದೆ.


Click it and Unblock the Notifications











