ಕನ್ನಡ ಚಿತ್ರರಂಗಕ್ಕೆ ಬುಧವಾರ ಅಘೋಷಿತ ಬಂದ್!
ಸಾಹಸಸಿಂಹ ವಿಷ್ಣುವರ್ಧನ್ ಅವರು ಇಂದು ಜೀವಂತವಾಗಿದ್ದಿದ್ದರೆ ಅದೆಷ್ಟು ಸಂತಸ ಪಡುತ್ತಿದ್ದರೋ ಏನೋ! ಅವರೊಬ್ಬ ಉತ್ಕಟ ಕ್ರಿಕೆಟ್ ಅಭಿಮಾನಿ ಹಾಗೂ ಪ್ರೇಮಿ.ಕ್ರಿಕೆಟನ್ನು ಅವರು ಕೇವಲ ನೋಡುವುದರಲ್ಲಷ್ಟೇ ತೃಪ್ತಿಪಡಲಿಲ್ಲ. ಸ್ವತಃ ಆಡುತ್ತಿದ್ದರು. ಯಾರಾದರೂ ಸಿಕ್ಕಿದರೆ ಮಾತು ಕ್ರಿಕೆಟ್ ಕಡೆಗೆ ಹೊರಳುತ್ತಿತ್ತು. ಇಷ್ಟೆಲ್ಲಾ ಹೇಳಲು ಬಲವಾದ ಕಾರಣವೂ ಇದೆ. ಅದೇನೆಂದರೆ ಬುಧವಾರ (ಮಾ.30) ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಸೆಮಿ ಫೈನಲ್!
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ಕುತೂಹಲವನ್ನು ನೋಡಲು ಸಿನಿಮಾ ತಾರೆಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ರಮೇಶ್, ಕಿಚ್ಚ ಸುದೀಪ್, ರೆಬೆಲ್ ಸ್ಟಾರ್ ಅಂಬರೀಷ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರಂತೂ ಬುಧವಾರ ಮನೆ ಬಿಟ್ಟು ಎಲ್ಲೂ ಕದಲುವ ಪರಿಸ್ಥಿತಿಯಲ್ಲಿಲ್ಲ! ಉಳಿದ ಸಿನಿಮಾ ತಾರೆಗಳ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿಲ್ಲ.
ಕಿರುತೆರೆ ಕಾರ್ಯಕ್ರಮಗಳಿಗೂ ಬುಧವಾರ ಹೊಡೆತ ಬೀಳಲಿದೆ. ಸದಾ ಧಾರಾವಾಹಿಗಳಿಗೆ ಅಂಟಿಕೊಂಡಿರುವವರೂ ಅತ್ತ ತಿರುಗಿಯೂ ನೋಡದ ಪರಿಸ್ಥಿತಿ ಉದ್ಭವಿಸಲಿದೆ. 10 ಸೆಕೆಂಡ್ಗಳ ಜಾಹೀರಾತಿಗೆ ಇಎಸ್ ಪಿಎನ್ ಸ್ಟಾರ್ ಸ್ಫೋರ್ಟ್ಸ್ ರು.18 ಲಕ್ಷ ನಿಗದಿಪಡಿಸಿಡಿಸಿದೆ ಎಂದರೆ ನೀವೇ ಊಹಿಸಿ ಎಷ್ಟು ಜೊತೆ ಕಣ್ಣುಗಳನ್ನು ಅವರು ಲೆಕ್ಕಹಾಕಿರಬಹುದು.
ಇನ್ನು ಚಿತ್ರಮಂದಿರಗಳಂತೂ ಬಿಕೋ ಎನ್ನಲಿವೆ. ಸದಾ ಜನಜಂಗುಳಿಯಿಂದ ಗಿಜಿಗುಡುವ ಕೆ ಜಿ ರಸ್ತೆ, ಮೆಜಿಸ್ಟಿಕ್ ಪ್ರದೇಶವಂತೂ ಬಣಬಣ. ಚಿತ್ರೀಕರಣ, ನಿರ್ಮಾಣೇತರ ಚಟುವಟಿಕೆಗಳಿಗೂ ಬ್ರೇಕ್ ಬೀಳಲಿದೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗಕ್ಕೆ ಅಘೋಷಿತ ಬಂದ್ ಜಾರಿಯಾಗಲಿದೆ. ಕ್ರಿಕೆಟ್ ಅಭಿಮಾನಿಗಳಂತೂ ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ತಲೆದೋರಲಿದೆ. ಇದೆಲ್ಲಾ ಸಾಕಾರವಾಗಬೇಕಾದರೆ ವರುಣನ ಕೃಪೆ ಬೇಕು ಹಾಗೆಯೇ ವಿದ್ಯುತ್ ಕಣ್ಣಾಮುಚ್ಚಾಲೆ ಇರಬಾರದಷ್ಟೆ.


Click it and Unblock the Notifications











