‘ಹುಬ್ಬಳ್ಳಿ’ಮಾಡಿ ಓಂಪ್ರಕಾಶ್ ಗೆದ್ದ! ‘ಕೆಂಪೇಗೌಡ’ಗೆ ಸೈ ಅಂದ!
‘ತುಂಟ’ ಚಿತ್ರದಿಂದಾಗಿದ್ದ ನಷ್ಟ ‘ಹುಬ್ಬಳ್ಳಿ’ ಮೂಲಕ ಭರ್ತಿ... ಪ್ರತಿ ಚಿತ್ರದಲ್ಲೂ ಓಂಪ್ರಕಾಶ್ ನಂಬುವ ರಕ್ಷಿತಾ ಮತ್ತು ಮಚ್ಚು-ಲಾಂಗ್ಗಳು ಅವರಿಗೆ ಮೋಸ ಮಾಡಿಲ್ಲ!
‘ಹುಬ್ಬಳ್ಳಿ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ, ನಿರ್ದೇಶಕ-ನಿರ್ಮಾಪಕ ಎನ್.ಓಂಪ್ರಕಾಶ್ರಾವ್, ಮತ್ತೊಂದು ಸಲ ಸುದೀಪ್ ಅವರನ್ನೇ ಹಾಕಿಕೊಂಡು ‘ಕೆಂಪೇಗೌಡ’ ಎಂಬ ಚಿತ್ರ ನಿರ್ಮಿಸಲು ಸಜ್ಜಾಗಿದ್ದಾರೆ.
ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ. ಈ ಮೊದಲು ಇದೇ ಹೆಸರನ್ನು ನಿರ್ಮಾಪಕ ಸೂರಪ್ಪ ಬಾಬು ನೋಂದಾಯಿಸಿಕೊಂಡಿದ್ದರು. ಉಪೇಂದ್ರ ಅವರನ್ನು ಹಾಕಿಕೊಂಡು ಸೂರಪ್ಪ ಚಿತ್ರ ಮಾಡಲು ಹೊರಟಿದ್ದು ಹಳೆಯ ಕಥೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಮುಠಾಮೇಸ್ತ್ರಿ’ ಚಿತ್ರದ ರೀಮೇಕ್ಗೆ ಈ ಹೆಸರನ್ನು ಪಡೆಯಲಾಗಿತ್ತು.
ಆದರೆ ಓಂಪ್ರಕಾಶ್ ಸದ್ಯಕ್ಕೆ ‘ಕೆಂಪೇಗೌಡ’ ಎಂಬ ಹೆಸರನ್ನು ಮಾತ್ರ ತೆಗೆದುಕೊಂಡಿದ್ದಾರೆ. ಈ ಚಿತ್ರ ‘ಮುಠಾಮೇಸ್ತ್ರಿ’ಯ ರೀಮೇಕ್ ಅಲ್ವಂತೆ. ಚಿತ್ರದ ಮುಹೂರ್ತ 2007ನೇ ವರ್ಷದ ಜನವರಿ 14ರಂದು, ಬೆಂಗಳೂರಿನಲ್ಲಿ ನಡೆಯಲಿದೆ.
ಚಿತ್ರಕ್ಕಾಗಿ ಓಂಪ್ರಕಾಶ್ ಸಾಕಷ್ಟು ಸಂಶೋಧನೆ ಕೂಡ ಮಾಡಿದ್ದಾರೆ. ಅಂದಹಾಗೆ, ಸುದೀಪ್ ಒಂದು ವರ್ಷದ ಹಿಂದೆಯೇ ಈ ಕಥೆಯನ್ನು ಕೇಳಿಸಿಕೊಂಡಿದ್ದಾರಂತೆ.
ಎರಡು ವಾರಗಳ ಹಿಂದೆ ತೆರೆಕಂಡಿರುವ ‘ಹುಬ್ಬಳ್ಳಿ’ ಈಗಾಗಲೇ 3ಕೋಟಿ ರೂಪಾಯಿ ಗಳಿಸಿದೆ. ಒಟ್ಟು 49ಪ್ರಿಂಟ್ ಹಾಕಿಸಲಾಗಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ‘ತುಂಟ’ ಚಿತ್ರದಿಂದ ಆಗಿದ್ದ ನಷ್ಟವನ್ನು ತುಂಬಿಕೊಂಡಿದ್ದೇನೆ ಎಂದು ಹೇಳಲು ಓಂಪ್ರಕಾಶ್ರಾವ್ ಮರೆಯುವುದಿಲ್ಲ.


Click it and Unblock the Notifications











