ಕನ್ನಡ ಚಿತ್ರರಂಗ 2008; ಗೆದ್ದಿದ್ದು ಕೇವಲ ಇಪ್ಪತ್ತು

ಉಪೇಂದ್ರ ಅಭಿನಯದ 'ಬುದ್ಧಿವಂತ' ನಂಬರ್ ಒನ್ ಸ್ಥಾನ ಗಿಟ್ಟಿಸಿದ್ದರೆ, ಪುನೀತ್ ರಾಜಕುಮಾರ್ ಅವರ 'ವಂಶಿ' ಎರಡನೇ ಸ್ಥಾನದಲ್ಲಿದೆ. ಸುದೀಪ್ ಅಭಿನಯದ 'ಗೂಳಿ', 'ಮುಸ್ಸಂಜೆಯ ಮಾತು' ಕೂಡಾ ಅಡ್ಡಿಯಿಲ್ಲ ಎನ್ನವಷ್ಟು ಗೆಲುವು ಸಾಧಿಸಿವೆ. 2008 ಸುದೀಪ್ ಅವರಿಗೆ ವಿಶೇಷ ವರ್ಷ ಎನ್ನಬೇಕು. ಬಾಲಿವುಡ್ ನ ಸ್ಟಾರ್ ನಿರ್ದೇಶಕ ರಾಂ ಗೋಪಾಲ್ ವರ್ಮಾ ನಿರ್ದೇಶನದ 'ಫೂಂಕ್' ಚಿತ್ರದಲ್ಲಿ ಆಭಿನಯಿಸಿದರಾದರೂ ಚಿತ್ರ ಹಿಟ್ ಆಗಲಿಲ್ಲ. ಹಿಂದಿ ಚಿತ್ರವೊಂದರಲ್ಲಿ, ಅದರಲ್ಲಿಯೂ ರಾಂ ಗೋಪಾಲ್ ವರ್ಮಾ ಅವರ ಚಿತ್ರ ನಟಿಸುವ ಅವಕಾಶ ಸಿಕ್ಕಿದ್ದು ಅವರ ಅದೃಷ್ಟ ಎನ್ನಬಹುದು.
ದರ್ಶನ್ ಅವರ 'ಗಜ' ಚಿತ್ರ ಕೂಡಾ 2008 ರ ಹೊಸ ವರ್ಷದಲ್ಲಿ ಭರ್ಜರಿ ಯಶಸ್ಸು ಕಂಡಿತು. ಜೊತೆಗೆ ಸಾಕಷ್ಟು ಹಣವನ್ನು ಬಾಚಿಕೊಂಡಿತು. ನಂತರ ಬಂದ 'ಇಂದ್ರ' ಮತ್ತು 'ಅರ್ಜುನ್' ಚಿತ್ರಗಳು ಇನ್ನಿಲ್ಲದಂತೆ ನೆಲಕಚ್ಚಿದವು. ಸ್ವಂತ ಬ್ಯಾನರ್ ನಲ್ಲಿ ನಿರ್ಮಿಸಲಾದ 'ನವಗ್ರಹ' ಕೂಡ ಆರಂಭದಲ್ಲಿ ಯಶಸ್ಸಿನ ಮುನ್ಸೂಚನೆ ನೀಡಿ ಕೊನೆಗೂ ಠುಸ್ ಆಯಿತು.
ಕನ್ನಡ ಸಿನಿಮಾರಂಗದಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪುನೀತ್ ರಾಜ್ ಕುಮಾರ್ ಅವರ 'ಬಿಂದಾಸ್' ಗಳಿಕೆಯಲ್ಲಿ ಅವರೇಜ್ ಎನ್ನಬಹುದು. 'ವಂಶಿ' ಸೂಪರ್ ಹಿಟ್ ಚಿತ್ರವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಗಾಳಿಪಟ' ಬಾಕ್ಸಾಫೀಸನಲ್ಲಿ ಗೆಲುವು ಕಂಡರೆ, ಅವರ ನಟನೆಯ 'ಅರಮನೆ', 'ಸಂಗಮ', 'ಬೊಂಬಾಟ್' ಚಿತ್ರಗಳು ಸಂಪೂರ್ಣವಾಗಿ ಸೋತಿವೆ. ಆದರೆ ಈ ವರ್ಷ ಆರ್ಥಿಕ ವಿಷಯದಲ್ಲಿ ಗಣೇಶ್ ಎಲ್ಲರಿಗಿಂತಲೂ ಮುಂದೆ ಎನ್ನುತ್ತದೆ ಚಿತ್ರರಂಗ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications











