ಭಂಡಾರಿ ಬ್ರದರ್ಸ್ ಗೆ ಚಾಲೆಂಜ್ ಹಾಕಿದ ಲೋಕಲ್ ಬಾಯ್ ಯೋಗಿ
Recommended Video

ಪ್ರತಿ ಶುಕ್ರವಾರ ಬಂತು ಅಂದರೆ ಸಿನಿ ಪ್ರೇಮಿಗಳಿಗೆ ಹಬ್ಬ ಇದ್ದಂತೆ. ಶುಕ್ರವಾರ ರಿಲೀಸ್ ಆಗೋ ಹೊಸ ಸಿನಿಮಾ ನೋಡದೆ ಇದ್ದರೆ ಎಷ್ಟೊ ಜನಕ್ಕೆ ನಿದ್ದೆ ಬರಲ್ಲ. ಇನ್ನು ಯು ಎಫ್ ಒ ಮತ್ತು ಕ್ಯೂಬ್ ಸಮಸ್ಯೆಯಿಂದ ಕನ್ನಡದಲ್ಲಿ ಸಿನಿಮಾ ಪ್ರದರ್ಶನ ಸರಿಯಾಗಿ ಆಗಿರಲಿಲ್ಲ. ಆದರೆ ಈ ವಾರದಿಂದ ಮತ್ತೆ ದೊಡ್ಡ ಸಿನಿಮಾಗಳ ಪ್ರದರ್ಶನ ಶುರುವಾಗಿದೆ.
'ಟಗರು' ಸಿನಿಮಾದ ನಂತರ ಎರಡು ವಾರದಲ್ಲಿ ಕನ್ನಡದಲ್ಲಿ ಯಾವ ದೊಡ್ಡ ಸಿನಿಮಾಗಳು ಬಂದಿರಲಿಲ್ಲ. ಕಳೆದ ವಾರ 'ದಂಡುಪಾಳ್ಯ 3' ಸಿನಿಮಾ ಬಂದರು ಜನರಿಗೆ ಅಷ್ಟೊಂದು ಇಷ್ಟ ಆಗಿರಲಿಲ್ಲ. ಆದರೆ ಈ ವಾರ ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾಗಳ ಜೊತೆಗೆ ಎರಡು ಹೊಸ ತಂಡದ ಸಿನಿಮಾಗಳು ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ. ಭಂಡಾರಿ ಸಹೋದರರ ಸಿನಿಮಾಗೆ ಲೂಸ್ ಮಾದ ಯೋಗಿ ಸವಾಲು ಹಾಕಲು ಸಜ್ಜಾಗಿದ್ದಾರೆ. ಸ್ಯಾಂಡಲ್ ವುಡ್ ಸಿನಿಮಾಗಳ ಜೊತೆಗೆ ಬಾಲಿವುಡ್ ಅಂಗಳಕ್ಕೆ ರಾಣಿ ಮುಖರ್ಜಿ ಅವರ ಒಂದು ವಿಭಿನ್ನ ಸಿನಿಮಾ ಕಾಲಿಡುತ್ತಿದೆ.
ಅಂದಹಾಗೆ, ನಾಳೆ ತೆರೆಗೆ ಬರುತ್ತಿರುವ ಕನ್ನಡ ಮತ್ತು ಹಿಂದಿ ಸಿನಿಮಾಗಳ ಪಟ್ಟಿ ಮುಂದಿದೆ ಓದಿ..

ಯೋಗಿ ದುನಿಯಾ
ಲೂಸ್ ಮಾದ ಯೋಗಿ ಅಭಿನಯದ 'ಯೋಗಿ ದುನಿಯಾ' ಸಿನಿಮಾ ಈ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದರೆ ಈಗ ಎಲ್ಲ ಅಡೆತಡೆಗಳ ನಂತರ ಸಿನಿಮಾ ಬಿಡುಗಡೆಗೆ ನಾಳೆ ವೇದಿಕೆ ರೆಡಿಯಾಗಿದೆ. ಯೋಗಿ ಜೊತೆಗೆ ಚಿತ್ರದಲ್ಲಿ ನಾಯಕಿಯಾಗಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ಹರಿ ನಿರ್ದೇಶನ ಮತ್ತು ಬಿ.ಜೆ.ಭರತ್ ಸಂಗೀತ ನಿರ್ದೇಶನ ಚಿತ್ರದಲ್ಲಿದೆ. ಬೆಂಗಳೂರಿನ ಒಂದು ಏರಿಯಾದ ಒಬ್ಬ ಹುಡುಗನ ಕಥೆಯನ್ನು ಸಿನಿಮಾ ಹೊಂದಿದೆ.
ಮುಖ್ಯ ಚಿತ್ರಮಂದಿರ : ಅನುಪಮ

ರಾಜರಥ
'ರಂಗಿತರಂಗ' ಸಿನಿಮಾದ ನಂತರ ಮತ್ತೆ ಅನೂಪ್ ಭಂಡಾರಿ ಬಂದಿದ್ದಾರೆ. ಸಿನಿಮಾದಲ್ಲಿ ನಾಯಕ ನಿರೂಪ್ ಭಂಡಾರಿ ಮತ್ತು ನಟಿ ಅವಂತಿಕಾ ಶೆಟ್ಟಿ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಾಲಿವುಡ್ ನಟ ಆರ್ಯ ವಿಶೇಷ ಪಾತ್ರ ಮಾಡಿದ್ದಾರೆ. ರವಿಶಂಕರ್ ಲುಕ್ ಗಮನ ಸೆಳೆದಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ 'ರಾಜರಥ' ಸಿನಿಮಾ ಬಿಡುಗಡೆಯಾಗಲಿದೆ
ಮುಖ್ಯ ಚಿತ್ರಮಂದಿರ : ತ್ರಿವೇಣಿ

ಅತೃಪ್ತ
'ಅತೃಪ್ತ' ಎಂಬ ಹಾರರ್ ಸಿನಿಮಾ ಕೂಡ ನಾಳೆ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಈ ಹಿಂದೆ ‘ಪ್ರೇಮಾಸುರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಾಗೇಶ್ ನಿರ್ದೇಶನ ಮಾಡಿದ್ದಾರೆ. ‘ಭಜರಂಗಿ' ಸಿನಿಮಾದಲ್ಲಿ ಶಿವಣ್ಣನ ತಂಗಿಯ ಪಾತ್ರ ಮಾಡಿದ್ದ ಶೃತಿ ಸಿನಿಮಾದ ನಾಯಕಿ ಆಗಿದ್ದಾರೆ. ಅರ್ಜುನ್ ಯೋಗಿ ಈ ಚಿತ್ರದ ಹೀರೋ. 'ಅತೃಪ್ತ' ಚಿತ್ರದಲ್ಲಿ ಆತ್ಮದ ಕಥೆ ಇದೆಯಂತೆ.

ಮುಖ್ಯಮಂತ್ರಿ ಕಳದೋದ್ನಪ್ಪೋ
'ಮುಖ್ಯಮಂತ್ರಿ ಕಳದೋದ್ನನಪ್ಪೋ, ಹುಡುಕಿ ಕೊಡ್ರೀ' ಎಂಬ ಹೊಸ ಕನ್ನಡ ಸಿನಿಮಾ ಕೂಡ ನಾಳೆ ರಿಲೀಸ್ ಆಗುತ್ತಿದೆ. ಈ ಸಿನಿಮಾ ರಾಜಕೀಯದ ಹಿನ್ನಲೆಯ ಕಥೆ ಹೊಂದಿದೆ. ಶಿವಕುಮಾರ್ ಆರ್.ಭದ್ರಯ್ಯ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಭರತ್ ಭದ್ರಯ್ಯ ಮತ್ತು ಅಮೂಲ್ಯ ರಾಜ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಾಬು ಹೀರಣಯ್ಯ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ವಿಭಿನ್ನ ಹಿಂದಿ ಸಿನಿಮಾ
ಈಗಾಗಲೇ ತನ್ನ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದಿರುವ 'ಹಿಚ್ಕಿ' ಸಿನಿಮಾ ನಾಳೆ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದೆ. ಸಿನಿಮಾದ ಟ್ರೇಲರ್ ದೊಡ್ಡ ಹಿಟ್ ಆಗಿದೆ. ರಾಣಿ ಮುಖರ್ಜಿ ಚಿತ್ರದಲ್ಲಿ ನೈನಾ ಮಥುರ್ ಎಂಬ ನರ ಮಂಡಲದ ನ್ಯೂನತೆ ಇರುವ ಒಬ್ಬ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಬರುತ್ತಿರುವ ಸದಭಿರುಚಿಯ ಸಿನಿಮಾಗಳ ಸಾಲಿಗೆ 'ಹಿಚ್ಕಿ' ಕೂಡ ಸೇರಲಿದೆ.

ನಿಮ್ಮ ಆಯ್ಕೆ ಯಾವುದು
ಈ ವಾರ ರಿಲೀಸ್ ಆಗುತ್ತಿರುವ ಈ ಸಿನಿಮಾಗಳಲ್ಲಿ ನೀವು ನೋಡುವ ಸಿನಿಮಾದ ಯಾವುದು ಎಂದು ಕೆಳಗಿನ ಕಮೆಂಟ್ಸ್ ಬಾಕ್ಸ್ ಮೂಲಕ ತಿಳಿಸಿ.


Click it and Unblock the Notifications











