ನಟಿಗೆ ವಂಚಿಸಿದ ರೌಡಿ ಕುಣಿಗಲ್ ಗಿರಿ ಸಹೋದರ: ದೂರು ದಾಖಲು
ಕುಖ್ಯಾತ ರೌಡಿ ಕುಣಿಗಲ್ ಗಿರಿಯ ಸಹೋದರ ಹರೀಶ ನಟಿಯೊಬ್ಬರಿಗೆ ವಂಚಿಸಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಗ್ಗನಹಳ್ಳಿ ನಿವಾಸಿಯಾದ ಯುವತಿಯೊಬ್ಬರು ಸಿನಿಮಾ, ಧಾರಾವಾಹಿಗಳಲ್ಲಿ ಸಹ ಕಲಾವಿದೆಯಾಗಿ ನಟಿಸುತ್ತಾ ನಗರದಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಇದನ್ನು ಅರಿತ ಹರೀಶ ಮಹಿಳೆಯನ್ನು ನಂಬಿಸಿ ಆಕೆಯೊಂದಿಗೆ ಪ್ರೀತಿ ನಾಟಕವಾಡಿದ್ದಾನೆ.
ಆಕೆಯನ್ನು ಮಾತಿನಲ್ಲೇ ಮರುಳು ಮಾಡಿ ಯಾರ ಹಾಜರಿಯೂ ಇಲ್ಲದೆ ಮನೆಯಲ್ಲಿಯೇ ಮದುವೆಯಾಗಿ ತಾಳಿ ಸಹ ಕಟ್ಟಿದ್ದಾನೆ. ಮದುವೆಯಾದ ಬಳಿಕ ಆಕೆಯ ಬಳಿ ಇದ್ದ ಚಿನ್ನಾಭರಣ ಹಾಗೂ 2.50 ಲಕ್ಷ ಹಣ ದೋಚಿ ಪರಾರಿಯಾಗಿದ್ದಾನೆ.

ಹಣ, ಚಿನ್ನಾಭರಣ ತೆಗೆದುಕೊಂಡು ಹೋದ ಬಳಿಕ ಹರೀಶ್, ಸಹ ಕಲಾವಿದೆಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದ. ಹರೀಶ್ ಕುರಿತಾಗಿ ಮಹಿಳೆ ವಿಚಾರಿಸಿದಾಗ ತಿಳಿದು ಬಂದಿದೆ ಹರೀಶ್ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆಂದು.
ಇದಾದ ಬಳಿಕ ನ್ಯಾಯ ಕೇಳಲೆಂದು ಸಹ ಕಲಾವಿದೆಯು ಹರೀಶ್ ಪತ್ನಿ ಹಾಗೂ ಅತ್ತೆಯ ಬಳಿ ಹೋದಾಗ ಇಬ್ಬರೂ ಈ ಯುವತಿಯನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಕಳಿಸಿದ್ದಾರೆ. ನಂತರ ಯುವತಿಯು ರಾಜಗೋಪಾಲನಗರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಹರೀಶ್ನನ್ನು ಠಾಣೆಗೆ ಕರೆಸಿದ ಪೊಲೀಸರು ಆತನಿಂದ ಒಂದು ಲಕ್ಷ ಹಣದ ಚೆಕ್ ಅನ್ನು ಯುವತಿಗೆ ಕೊಡಿಸಿದ್ದಾರೆ.
ಆ ಚೆಕ್ ಅನ್ನು ಬ್ಯಾಂಕ್ಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲ ಎಂಬುದು ಗೊತ್ತಾಗಿದೆ. ಈ ಬಗ್ಗೆ ಹರೀಶ್ನನ್ನು ಪ್ರಶ್ನೆ ಮಾಡಿದಾಗ ಹರೀಶ್ ಗಲಾಟೆ ಮಾಡಿ ಯುವತಿಯ ಮೊಬೈಲ್ಗಳನ್ನು ಒಡೆದು ಹಾಕಿದ್ದಾನೆ. ಪತ್ನಿಯಿಂದ ಸಹ ಕಲಾವಿದೆಗೆ ಕರೆ ಮಾಡಿಸಿ, ಕುಣಿಗಲ್ ಗಿರಿ ನನ್ನ ಮೈದುನ ಅವನಿಗೆ ಹೇಳಿ ನಿನ್ನ ಕೊಲೆ ಮಾಡಿಸುವೆ ಎಂದು ಬೆದರಿಕೆ ಹಾಕಿಸಿದ್ದಾನೆ. ಅದಾದ ಕೆಲವೇ ಹೊತ್ತಿಗೆ ಬೇರೆ ಸಂಖ್ಯೆಯಿಂದ ಸಹ ಕಲಾವಿದೆಗೆ ಕರೆ ಬಂದಿದ್ದು ತಾನು ಕುಣೀಗಲ್ ಗಿರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಯುವತಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದೆಲ್ಲವನ್ನೂ ಸಹ ಕಲಾವಿದೆಯೂ ದೂರಿನಲ್ಲಿ ದಾಖಲಿಸಿದ್ದಾಳೆ.


Click it and Unblock the Notifications











