ಫೈಟ್ ದೃಶ್ಯಗಳ ಚಿತ್ರೀಕರಣ: ವಾಣಿಜ್ಯ ಮಂಡಳಿ ಹೊಸ ಸೂಚನೆ
ಕೆಲವು ದಿನಗಳ ಹಿಂದಷ್ಟೆ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ ಫೈಟರ್ ವಿವೇಕ್ ಸಾವನ್ನಪ್ಪಿದ ಬಳಿಕ ಆಕ್ಷನ್ ದೃಶ್ಯಗಳ ಚಿತ್ರೀಕರಣ ಮತ್ತು ಚಿತ್ರೀಕರಣಕ್ಕೆ ಬಳಸುವ ಫೈಟರ್ಗಳ ಆಯ್ಕೆ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೆಲವು ಸೂಚನೆಗಳನ್ನು ಹೊರಡಿಸಿದೆ.
ಇನ್ನು ಮುಂದೆ ಫೈಟರ್ಗಳನ್ನು ಆಕ್ಷನ್ ದೃಶ್ಯಗಳಿಗೆ ಬಳಸುವಾಗ ಅವರಿಗೆ ವಿಮೆ ಮಾಡಿಸುವುದು ಕಡ್ಡಾಯ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ. ಜೀವ ವಿಮೆ ಇರುವ ಫೈಟರ್ಗಳನ್ನಷ್ಟೆ ಆಕ್ಷನ್ ದೃಶ್ಯಗಳಿಗೆ ಬಳಸಬೇಕು ಎಂದು ಸೂಚನೆ ನೀಡಲಾಗಿದೆ.
ಫೈಟರ್ಗಳಿಗೆ ಮಾತ್ರವೇ ಅಲ್ಲದೆ ಚಿತ್ರಯುನಿಟ್ನ ಎಲ್ಲರಿಗೂ ಜೀವವಿಮೆಯನ್ನು ನಿರ್ಮಾಪಕರು ಮಾಡಿಸಬೇಕು. ಗ್ರೂಪ್ ಇನ್ಶುರೆನ್ಸ್ ಇಲ್ಲದೆ ಚಿತ್ರೀಕರಣ ಮಾಡುವಂತೆಯೇ ಇಲ್ಲ ಎಂದು ವಾಣಿಜ್ಯ ಮಂಡಳಿ ಸೂಚನೆ ನೀಡಿದೆ. ಇದು ಸಣ್ಣ ನಿರ್ಮಾಪಕರ ತಲೆ ನೋವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಇನ್ನು ಆಕ್ಷನ್ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಸಕಲ ಭದ್ರತೆಗಳನ್ನು ತೆಗೆದುಕೊಂಡಿರಬೇಕು. ಜೊತೆಗೆ ದೃಶ್ಯಗಳ ಶೂಟಿಂಗ್ ಸಮಯದಲ್ಲಿ ಒಬ್ಬ ವೈದ್ಯ, ನರ್ಸ್, ಆಂಬುಲೆನ್ಸ್ ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯ ಸ್ಥಳದಲ್ಲಿ ಇಟ್ಟುಕೊಂಡೇ ಫೈಟ್ ದೃಶ್ಯಗಳ ಚಿತ್ರೀಕರಣ ಮಾಡಬೇಕು ಎಂದು ಸಹ ವಾಣಿಜ್ಯ ಮಂಡಳಿ ಹೇಳಿದೆ.

ಸೂಚನೆ ಹೊರಡಿಸಿರುವ ಚಲನಚಿತ್ರ ವಾಣಿಜ್ಯ ಸಂಸ್ಥೆ
ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಫೈಟರ್ಗಳಿಂದ ಪ್ರತ್ಯೇಕ ಒಪ್ಪಿಗೆ ಪತ್ರವನ್ನು ಪಡೆದುಕೊಳ್ಳಬೇಕು. ಫೈಟರ್ಗಳಿಗೆ ಅಲ್ಲಿ ಸೂಕ್ತ ಭದ್ರತೆ ಇತರೆ ವ್ಯವಸ್ಥೆಗಳು ಒಪ್ಪಿತವಾದರಷ್ಟೆ ಅವರು ಒಪ್ಪಂದಕ್ಕೆ ಸಹಿ ಹಾಕಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಚಿತ್ರೀಕರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಆಯಾ ಸಂಘದ ಮುಖ್ಯಸ್ಥರೇ ನೇರ ಹೊಣೆ ಆಗಿರುತ್ತಾರೆ ಎಂದು ಫಿಲಂ ಚೇಂಬರ್ ಹೇಳಿದೆ.

ಮುನ್ನೆಚ್ಚರಿಕೆ ಇರಲಿಲ್ಲ ಎಂದ ನಟ ಅಜಯ್ ರಾವ್
ಹತ್ತು ದಿನಗಳ ಹಿಂದೆ ಆಗಸ್ಟ್ 09ರಂದು ಬಿಡದಿ ಸಮೀಪದ ಜೋಗಿಪಾಳ್ಯ ಗ್ರಾಮದಲ್ಲಿ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ವಿದ್ಯುತ್ ಪ್ರವಹಿಸಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ರಂಜಿತ್ ಹೆಸರಿನ ಮತ್ತೊಬ್ಬ ಫೈಟರ್ ಗಾಯಾಳುವಾಗಿದ್ದರು. ಸೆಟ್ನಲ್ಲಿ ಸೂಕ್ತವಾದ ಭದ್ರತೆ ಇರದ ಕಾರಣದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿತ್ತು. 'ಲವ್ ಯು ರಚ್ಚು' ಸಿನಿಮಾದ ನಾಯಕ ಅಜಯ್ ರಾವ್ ಸಹ ಫೈಟಿಂಗ್ ದೃಶ್ಯ ಚಿತ್ರೀಕರಣ ಮಾಡುವಾಗ ಸೂಕ್ತವಾದ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಿದ್ದರು.

ತಲೆ ಮರೆಸಿಕೊಂಡಿರುವ ನಿರ್ಮಾಪಕ ಗುರು ದೇಶಪಾಂಡೆ
ಸಿನಿಮಾ ಸೆಟ್ನಲ್ಲಿ ವಿವೇಕ್ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್, ಸಿನಿಮಾದ ಮ್ಯಾನೇಜರ್ ಫರ್ನಾಂಡೀಸ್ ಅವರುಗಳನ್ನು ಬಿಡದಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದಾರೆ. ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧವೂ ಪ್ರಕರಣ ದಾಖಲಾಗಿದೆ ಆದರೆ ಅವರು ಪೊಲೀಸರು ಕೈಗೆ ಸಿಕ್ಕದೆ ತಲೆ ಮರೆಸಿಕೊಂಡಿದ್ದಾರೆ. ಈ ಸಮಯದಲ್ಲಿ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಸುದ್ದಿಗೋಷ್ಠಿ ನಡೆಸಿ ಗುರು ದೇಶಪಾಂಡೆ ಇ-ಮೇಲ್ ಮಾಡಿ ಹೇಳಿರುವಂತೆ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ ಹೇಳಿದರು. ವಿವಿಧ ಸಂಘಗಳು ಸಹ ವಿವೇಕ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದವು.

ಕಡ್ಡಾಯ ಸುರಕ್ಷತಾ ಕ್ರಮ ಬಿಡುಗಡೆಗೆ ಒತ್ತಾಯ
ವಿವೇಕ್ ಸಾವಿನ ಬಳಿಕ ಚಿತ್ರರಂಗದಲ್ಲಿ ಮತ್ತೆ ಫೈಟರ್ಗಳ ಬಗ್ಗೆ ಚರ್ಚೆ ಏರ್ಪಟ್ಟಿದ್ದು, ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಚಿತ್ರೀಕರಣ ಮಾಡಬಾರದು ಎಂದು ಹಲವರು ಹೇಳಿದ್ದಾರೆ. ಫೈಟರ್ ವಿವೇಕ್ ಸಾವಿಗೆ ಮುನ್ನೆಚ್ಚರಿಕೆ ಇಲ್ಲದೇ ಇರುವುದೇ ಕಾರಣ ಎಂದೂ ಆರೋಪಿಸಿದ್ದಾರೆ. ಚಿತ್ರೀಕರಣ ಸಂದರ್ಭದಲ್ಲಿ ಬಳಸಬೇಕಾದ ಸುರಕ್ಷತಾ ಕ್ರಮಗಳ ಅಧಿಕೃತ ಪಟ್ಟಿಯನ್ನು ಫಿಲಂ ಚೇಂಬರ್ ಅಥವಾ ಸರ್ಕಾರವೇ ಬಿಡುಗಡೆ ಮಾಡಿ ಅದನ್ನು ಕಡ್ಡಾಯಗೊಳಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಈ ನಡುವೆ ಫಿಲಂ ಚೇಂಬರ್ ಮೇಲಿನಂತೆ ಸೂಚನೆಗಳನ್ನು ಹೊರಡಿಸಿದೆ.


Click it and Unblock the Notifications











