ಮತ್ತೊಬ್ಬರು ಪತ್ರಕರ್ತರ ಸಿನಿಮಾ 'ನೀನೆ ಬರಿ ನೀನೆ'

ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಈ ಮೊದಲು ಪೊಲೀಸ್ ಕ್ವಾಟ್ರಸ್, ನಮ್ ಏರಿಯಾಲಿ ಒಂದಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರಿಗೆ ಪರಿಚಿತರಾದವರು. ಇವರು ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಇತ್ತೀಚಿಗಷ್ಟೇ 'ನಮ್ ಲೈಫಲ್ಲಿ' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದು ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ.
ನೀನೆ ಬರಿ ನೀನೆ ಚಿತ್ರದ ಕಥೆ ಹಾಗೂ ನಿರ್ದೇಶನ ಬರಹಗಾರ ಹಾಗೂ ನಿರೂಪಕ ದೀಪಕ್ ತಿಮ್ಮಯ ಅವರದು. ಇವರು ಉದಯ ಪ್ರಸಾರವಾಗುತ್ತಿದ್ದ 'ಜೇಡರ ಬಲೆ' ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಪರಿಚಿತರು. ಅಷ್ಟೇ ಅಲ್ಲ, ಟಿವಿ ಹೌಸ್ ಎಂಬ ಸಂಸ್ಥೆಯನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವವರು.
ದೀಪಕ್ ತಿಮ್ಮಯ ನಿರ್ದೇಶನದ ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ, ಕಥೆಗಾರ ವಿನಾಯಕ್ ಭಟ್ ಅವರದು. ಚಿತ್ರದಲ್ಲಿ ಆರು ಹಾಡುಗಳಿದ್ದು ಎಲ್ಲದಕ್ಕೂ ಸಾಹಿತ್ಯ ಬರೆದಿರುವವರು ಜಯಂತ್ ಕಾಯ್ಕಿಣಿ. ಸಂಗೀತ ಮನೋಮೂರ್ತಿಯವರದು. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿರುವ ಹಾಡುಗಳು ಈ ಚಿತ್ರದ ಬೋನಸ್.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಒಬ್ಬರು ತಶು ಕೌಶಿಕ್, ಇನ್ನೊಬ್ಬರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಅಂದಹಾಗೆ, ಈ ಚಿತ್ರದಲ್ಲಿ ಗಾಯಕ ಸೋನು ನಿಗಮ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಅದು ಯಾವ ರೀತಿಯ ಪಾತ್ರ, ಅವರೂ ನಾಯಕರಲ್ಲೊಬ್ಬರೋ ಅಥವಾ ಖಳನಾಯಕರೋ ಮುಂತಾದ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಒಟ್ಟಿನಲ್ಲಿ, 'ನೀನೆ ಬರಿ ನೀನೆ' ಎಂಬ ಆಕರ್ಷಕ ಶೀರ್ಷಿಕೆ ಹೊಂದಿರುವ ಚಿತ್ರ ಭಾರೀ ಸುದ್ದಿ ಮಾಡದೇ ಸೆಟ್ಟೇರಿ ಚಿತ್ರೀಕರಣ ಪ್ರಾರಂಭಿಸಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











